ಶಿಷ್ಯೋತ್ತಮರ ಮುಂದೆ ಗಾಜಿನ ಚೂರುಗಳು!

ಒಂದಾನೊಂದು ಗುರುಕುಲದಲ್ಲಿ ಒಬ್ಬ ಮಹಾಗುರು. ಅವರಲ್ಲಿ ಅನೇಕರು ಬಂದು ಕಲಿಯುತ್ತಿದ್ದರು. ಗುರುಕುಲವಾಸ ಮುಗಿದು ಶಿಷ್ಯರೆಲ್ಲರೂ ತಂತಮ್ಮ ವಿಷಯಗಳಲ್ಲಿ ಪಂಡಿತರಾಗಿ, ಊರುಗಳಿಗೆ ಹಿಂತಿರುಗುವ ಕಾಲ ಬಂತು.

“ಇಷ್ಟು ವರ್ಷ ಇಲ್ಲಿ ಇದ್ದುದಕ್ಕೆ ಇವರು ಏನು ಕಲಿತಿದ್ದಾರೋ ನೋಡೋಣ” ಎಂದು ಗುರು ಒಂದು ಸಣ್ಣ ಪರೀಕ್ಷೆ ಏರ್ಪಡಿಸಿದರು. ಅದೊಂದು ವಿಚಿತ್ರ ಪರೀಕ್ಷೆ. ಶಿಷ್ಯರು ಊರಿಗೆ ಹೋಗುವ ದಾರಿಯಲ್ಲಿ ಗಾಜಿನ ಚೂರುಗಳನ್ನು ಎರಚಿ, ಯಾರ್‍ಯಾರು ಏನೇನು ಮಾಡುತ್ತಾರೋ ನೋಡೋಣವೆಂದು ನಿಂತರು.

ಕೆಲವರು ಗಾಜಿನ ಚೂರುಗಳನ್ನು ದಾಟಿಕೊಂಡು ಹೋದರು. ಮತ್ತೆ ಕೆಲವರು ಅದನ್ನು ತುಳಿಯದ ಹಾಗೆ ಬಳಸಿಕೊಂಡು ಹೋದರು. ಇನ್ನೂ ಕೆಲವರು ಅಲ್ಲೇ ನಿಂತು, ಬಿದ್ದಿದ್ದ ಗಾಜಿನ ಚೂರುಗಳನ್ನು ಆಯ್ದು, ಅವನ್ನು ದಾರಿಯಿಂದ ಬದಿಗೆ ಹಾಕಿದರು.

“ನೀವು ಕಲಿತಿರುವುದು ಸಾಲದು” ಎಂದು ಗುರು ಮೊದಲಿನ ಎರಡೂ ಗುಂಪಿನವರನ್ನು ಹಿಂದಕ್ಕೆ ಕರೆದರು. “ನೀವು ಕಲಿತದ್ದು ಸಾರ್ಥಕವಾಯಿತು, ಹೋಗಿಬನ್ನಿ” ಎಂದು ಮೂರನೆಯ ಗುಂಪಿನವರನ್ನು ಮೆಚ್ಚಿ ಆಶೀರ್ವದಿಸಿ ಕಳಿಸಿಕೊಟ್ಟರು.

ಆಯುಷ್ಯದ ಕೆಲ ದಿನಗಳನ್ನು ದಾನ ಮಾಡಿದ್ದೇನೆ!

ಹಳ ದಿನಗಳ ಬಳಿಕ ಗೆಳೆಯ ಸಿದ್ದು ದೇವರಮನಿ ಕವಿತೆ ಓದುವ ಅವಕಾಶ ಒದಗಿಸಿದ್ದು ಚೇತನಾ ಅವರ ಬ್ಲಾಗ್. ಖುಷಿಯಾಯಿತು. ಚೇತನಾ ಅವರ ಹಾಗೆಯೇ ನಾವು ಎನಿಗ್ಮಾ ಹುಡುಗರು ಕೂಡ ಈ ಸಿದ್ದು ದೇವರಮನಿಯನ್ನು ಮೊದಲಿಗೆ ಕಂಡದ್ದು ಹಂಗಾಮದಲ್ಲೇ. ಬುಲ್ಡೋಜರಿನ ರಕ್ಕಸ ಹಲ್ಲುಗಳಿಗೆ ಸಿಕ್ಕಿಹೋದ ಆತನ ಅಂಗಡಿ, ಆತನ ಉತ್ಸಾಹಿ ಶ್ರಮಜೀವನ ಇದೆಲ್ಲದಕ್ಕೂ ಸಾಕ್ಷಿಯಾಗಿರುವ ಕೆಲ ಹುಡುಗರೂ ಎನಿಗ್ಮಾ ಬಳಗದಲ್ಲಿದ್ದಾರೆ. ಈಗ ಆತನ ಕವಿತೆಯೊಂದನ್ನು ತೆಗೆದುಕೊಟ್ಟ ಚೇತನಾ ಅವರಿಗೆ ಈ ಹುಡುಗರು ತುಂಬಿದ ಕಣ್ಣುಗಳಿಂದ ಕೃತಜ್ಞರಾಗಿದ್ದಾರೆ. ಸಿದ್ದು ಕವನಸಂಕಲನ ತರಲಿದ್ದಾನೆ ಎಂದು ಚೇತನಾ ಅವರು ಕೊಟ್ಟ ಸುದ್ದಿಯಂತೂ ನಮಗೆ ಇನ್ನಷ್ಟು ಸಂಭ್ರಮದ ವಿಚಾರ. ಚೇತನಾ ಬ್ಲಾಗಿನಲ್ಲಿಯ ಆ ಕವಿತೆಯನ್ನು ಚೇತನಾ ಅವರೇ ಬರೆದ ಟಿಪ್ಪಣಿಯಲ್ಲಿನ ಆ ಕವಿತೆಗೆ ಸಂಬಂಧಿಸಿದ ಭಾಗದೊಂದಿಗೆ ಇಲ್ಲಿ ಕೊಡುತ್ತಿದ್ದೇವೆ.

——————————

ಸಿದ್ಧು ದೇವರಮನಿಯ ‘ಆಯುಷ್ಯದ ಕೆಲ ದಿನಗಳನ್ನು ದಾನ ಮಾಡಿದ್ದೇನೆ’ ಕವಿತೆಯಿದೆಯಲ್ಲ, ಅದನ್ನವನು ಬರೆದ ಸಂದರ್ಭ ತೀರಾ ವಿಷಾದದ್ದು. ರಸ್ತೆ ಅಗಲೀಕರಣಕ್ಕಾಗಿ ಅವನ ಅಂಗಡಿ, ಮನೆ- ಮುಂಗಟ್ಟುಗಳನೆಲ್ಲ ಬುಲ್ಡೋಜರ್ರು ಸವರುತ್ತ ಸಾಗಿತಲ್ಲ, ಆಗ ಹುಟ್ಟಿದ್ದು. ಅಸಹನೆ, ಕೋಪ, ಹತಾಶೆಗಳು ಚಿಗಿಯಬೇಕಿದ್ದ ಹೊತ್ತಿನಲ್ಲಿ ಈ ಹುಡುಗ ಕವಿತೆಹುಟ್ಟಿಸಿಕೊಂಡು ಕುಳಿತಿದ್ದು ಸೋಜಿಗವಲ್ಲವೆ? ಅದೂ ಇಂತಹ ಮಾನವೀಯ ಮೌಲ್ಯದ ಕವಿತೆ… !

-ಚೇತನಾ ತೀರ್ಥಹಳ್ಳಿ

———————————-yes_i_can-siddudev

ಸಿದ್ಧು ದೇವರಮನಿ 

ನಾನು ಕತ್ತಲನ್ನು ಹುಡುಕುತ್ತಿದ್ದೇನೆ
ಇದರಥ೯ ನಾನು ಸೋಲು ಒಪ್ಪಿಕೊ೦ಡೆ, ಅ೦ತಲ್ಲ
ಕತ್ತಲ ಭೇಧಿಸುವ ಕಲೆ ಸಿದ್ದಿಸಿದ
ಭೂಮಿಗೊ೦ದು ಹೊಳಪು ತರುವ ತಾರೆಗಳ ವಿಳಾಸ ಬೇಕಾಗಿದೆ.

ನಾನು ಕತ್ತಲ ಬಣ್ಣವನ್ನ ಹುಡುಕುತ್ತಿದ್ದೇನೆ
ಇದರಥ೯ ಕಪ್ಪುಬಣ್ಣ ದಿಗಿಲುಗೊಳಿಸಿದೆ ಅ೦ತಲ್ಲ
ಕತ್ತಲಿನೊ೦ದಿಗೆ ಅವರ ನೆ೦ಟಸ್ತನ ಕಡಿದು ಹಾಕಬೇಕಿದೆ.

ಆಗಿನ್ನು ಮಲಗಿದ್ದೆವು
ಅಪ್ಪ ಎಲ್ಲರನ್ನು ಎಚ್ಚರಿಸಿದರು
ಅನತಿ ದೂರದಲ್ಲಿ ಕಟ್ಟಡ ಬೀಳಿಸುತ್ತಿರುವ ಯ೦ತ್ರದ ಸದ್ದು.
ಆ ಕತ್ತಲು ಹೆದರಿಸಿತು…
ಮನೆಯ ಸಾಮಾನುಗಳನೆಲ್ಲಾ ಬಯಲಿಗೆ ಇಡುತ್ತ ಇಡುತ್ತ
ಹೋದ೦ತೆಲ್ಲ ನಮ್ಮ ಮಾತುಗಳೆಲ್ಲ ಹುದುಗಿಹೋದವು.
ನಮಗೆ ಗೊತ್ತಗದೆ ನಾವು ಕತ್ತಲಿನ ಆಜ್ಞೆಯಲ್ಲಿದ್ದೆವು.
ಕೊನೆಗೊಮ್ಮೆ ದಣಿವಾದ೦ತೆ ಕ್ಷಣ ಹೊತ್ತು ಕೂತದ್ದು
ಬಿದ್ದ ಮನೆಯ ಕೊನೆಯ ಸೌಭಾಗ್ಯವಿರಬೇಕು!
ಏನಾಗುತ್ತಿದೆ…ಆಕಾಶ ನೋಡಿದೆ
ಉಹು೦: ಕತ್ತಲು ಸರಿಯಬಹುದಾದ ಯಾವುದೇ ಕುರುಹುಗಳಿರಲ್ಲಿಲ್ಲ
ಸ೦ದಭ೯ದ ಎಲ್ಲ ಸವಾಲುಗಳನ್ನು ಖುಶಿಪಟ್ಟೆ
ಕತ್ತಲು ಸರಿದ೦ತಾಯಿತು
ಈ ಜಗತ್ತು ಅದಕ್ಕೆ ” ಮು೦ಜಾವು” ಎ೦ದು ಹೆಸರಿಸಿತು
ನಾವು ಒಪ್ಪಿಕೊ೦ಡೆವು.
ಸೂರು ಇಲ್ಲದ ನನಗೆ ಎಲ್ಲರೂ ಊಟಕ್ಕೆ ಕರೆದರು
ನನಗೆ ಹೊಟ್ಟೆ ತು೦ಬಿತು.
ನಮ್ಮದೇ ಜ೦ಜಾಟದಲ್ಲಿ ಮರೆತ .. ನಾಕಾರು ದಿನ ಉಪವಾಸವಿದ್ದ
ನಮ್ಮ ಬೆಕ್ಕು “ಮಿನ್ನು” ನನ್ನ ಹತ್ತಿರ ಕೊಡ ಬರಲಿಲ್ಲ.
ನಾ ಅರಿಯಬಲ್ಲೆ
ಅದರ ಕಣ್ಣಿನ ಅತ೦ಕ ನಮ್ಮ ನೋವಿಗಿ೦ತ ದೊಡ್ಡದು
ಹಾಗಾಗಿಯೇ
ನಾನು ಕತ್ತಲಲ್ಲಿ ಮನೆ ಒಡೆದವರನ್ನ ಹುಡುಕುತ್ತಿದ್ದೇನೆ
ಇದರಥ೯ ಅವರನ್ನಿಡಿದು .. ಹೊಡೆದು ಕೊಲ್ಲುತ್ತೇನೆ ಅ೦ತಲ್ಲ
ಅವರಿಗೆ ನನ್ನ ಆಯುಷ್ಯದ ಕೆಲ ದಿನಗಳ ದಾನಮಾಡಿ
ಭ್ರಮೆ ತು೦ಬಿದ ಅವರ ಬದುಕನ್ನು ಬೆಳಕಿಸಬೇಕಿದೆ.

- ೨ -

ಬಯಲಿಗೆ ಬಿದ್ದ ಎಲ್ಲ ವಸ್ತುಗಳೊ೦ದಿಗೆ
ನಾವು ನಮ್ಮತನವನ್ನು ಕಾಯುತಿದ್ದೆವು.

ಬಯಲಲ್ಲಿ ಬಿದ್ದ ಚೆಲ್ಲಾಪಿಲ್ಲಿ ಜೀವನ ನೋಡಿ
ಅಪ್ಪ,
” ಈ ಪರಿಯ ಸೊಬಗು ಇನ್ಯಾವ ದೇವರಲಿ ಕಾಣೆ “
ಸಾಲು ನೆನಪಿಸಿಕೊ೦ಡು ನನ್ನಡೆಗೆ ನೋಡಿ ನಕ್ಕರು
ನಾನು ನಗುವುದನ್ನ ಕಲಿತೆ.

ಅರೆ, ನನ್ನ ಪುಸ್ತಕ.. ಕಾಪಿಟ್ಟ ಗೆಳೆಯರ ಪತ್ರ
ದಿನವೂ ನನ್ನಡೆಗೆ ನೋಡಿ ನಗುತ್ತಿದ್ದ
ನನ್ನ ಪುಟ್ಟ ತ೦ಗಿ ’ರೀತು’ ನ ಫೋಟೋ
ಹೀಗೆ ಎಲ್ಲವನ್ನು ಕಳೆದುಕೊ೦ಡಿದ್ದೇನೆ..
ನನ್ನವೆ೦ಬ ಎಲ್ಲವೂ ಕಳೆದಿವೆ..
ಈ ಇಡೀ ಜಗತ್ತು ನನ್ನದೆ೦ಬ
ದಿವ್ಯ ಉತ್ತರದೊ೦ದಿಗೆ
ನೀವು ಸಿಕ್ಕಾಗ ನಕ್ಕು ಮಾತಾಡಿಸುತ್ತೇನೆ.

ಕೆಂಪು ಪ್ರೇಮದ ರಾಯಭಾರ!

alexandra1.jpg 

ಫೆಮಿನಿಸಂ ಎಲ್ಲಿಂದಾದರೂ ಶುರುವಾಗಿರಲಿ,
ಅಲೆಕ್ಸಾಂಡ್ರಾಳ ಮನೆಯ ಉಪ್ಪಿನ ಋಣದಿಂದ
ಅದು ಮುಕ್ತವಾಗಿರಲಿಕ್ಕಂತೂ ಸಾಧ್ಯವಿಲ್ಲ!

______________________

ಚಿನ್ನು ಅಚವೆ

“ರೆಡ್ ಲವ್”.

ಅದೊಂದು ಕಾದಂಬರಿ. ಆ ಕಾದಂಬರಿಯ ಕಡೆಯಲ್ಲಿ ಕಥಾನಾಯಕಿ ತನ್ನ ಪ್ರಿಯಕರನನ್ನು ಬಿಟ್ಟುಬಿಡುತ್ತಾಳೆ. ಆದರೆ ಆತನಿಂದ ತನ್ನೊಳಗೆ ಅಂಕುರಿಸಿರುವ ಗರ್ಭವನ್ನು ಹಾಗೇ ಉಳಿಸಿಕೊಳ್ಳುವ ದಿಟ್ಟ ನಿರ್ಧಾರವನ್ನು ತೆಗೆದುಕೊಳ್ಳುತ್ತಾಳೆ.

“ರೆಡ್ ಲವ್” ಬರೆದವಳ ಕಥೆಯೂ ಹೆಚ್ಚು ಕಡಿಮೆ ಇದೇ ಬಗೆಯದು. ಮದುವೆಯಾದ ಮೂರು ವರ್ಷಗಳ ಬಳಿಕ ಗಂಡನನ್ನು ಬಿಡುತ್ತಾಳೆ. ಅದಾಗಲೇ ಆತನಿಂದ ಪಡೆದಿರುವ ಮಗುವನ್ನು ಅಷ್ಟೇ ಪ್ರೀತಿಯಿಂದ ಬೆಳೆಸುತ್ತಾಳೆ.

“ಪುರುಷನ ಅಗತ್ಯವಿಲ್ಲ” ಎಂಬ ನಿಶ್ಚಯದಲ್ಲಿ ಹಾಗೆ ನಡೆದವಳು ಅಲೆಕ್ಸಾಂಡ್ರಾ ಕೊಲೊಂಟಾಯ್. ರಷ್ಯಾದ ಸಮಾಜವಾದಿ ಚಳವಳಿಯ ಇತಿಹಾಸದಲ್ಲಿ ಬಲು ಘನತೆಯುಳ್ಳ ಹೆಸರು ಅವಳದು. ಒಂದು ದೇಶದ ರಾಯಭಾರತ್ವವನ್ನು ನಿಭಾಯಿಸಿದ ವಿಶ್ವದ ಮೊದಲ ಮಹಿಳೆ ಎಂಬ ಹಿರಿಮೆ ಕೂಡ ಅವಳ ಖಾತೆಯಲ್ಲಿದೆ. ೧೯೧೭ರ ರಷ್ಯನ್ ಕ್ರಾಂತಿಯ ವೇಳೆ ಲೆನಿನ್ನನ ಪಕ್ಷದಲ್ಲಿ ಅತ್ಯಂತ ಪ್ರಮುಖ ಸ್ಥಾನದಲ್ಲಿದ್ದ ಏಕೈಕ ಮಹಿಳೆ ಕೂಡ. ಲೆನಿನ್ನನ ಪಕ್ಷದಲ್ಲಿ ಮಹಿಳಾ ಘಟಕ ಸ್ಥಾಪನೆಗೆ ಕಾರಣಳಾದವಳೂ ಅವಳೇ.

ಅಲೆಕ್ಸಾಂಡ್ರಾ ಕ್ರಮಿಸಿದ ರಾಜಕೀಯ ಹೆದ್ದಾರಿಯ ಚಿತ್ರಣ ಸಿಗಲು ಇಷ್ಟು ವಿವರಗಳು ಸಾಕು. ಗಮನಿಸಬೇಕಾದ ಮುಖ್ಯ ಸಂಗತಿಯೆಂದರೆ, ಈ ಹೆದ್ದಾರಿಯನ್ನು ಅವಳು ಮಹಿಳಾ ಸಮುದಾಯದ ಬದುಕನ್ನು ಸುಂದರಗೊಳಿಸುವ ದಿಕ್ಕಿಗೆ ತಿರುಗಿಸಿಕೊಂಡಳು ಎಂಬುದು; ಮತ್ತು ಇದನ್ನು ಅವಳು ಅಕ್ಷರ ಲೋಕದ ಬಾಂಧವ್ಯದ ಮೂಲಕ ಸಾಧಿಸಿದಳು ಎಂಬುದು.

alexandra2.jpg

ಅಪ್ಪ ಸೇನಾಧಿಕಾರಿಯಾಗಿದ್ದ. ಅಮ್ಮ ಕೂಡ ಶ್ರೀಮಂತ ಕುಟುಂಬದವಳು. ಅಪ್ಪನಿಗೆ ಇವಳ ಅಮ್ಮ ಎರಡನೆಯ ಪತ್ನಿ.  ಮಗಳೆಂದರೆ ಇಬ್ಬರಿಗೂ ಅಚ್ಚುಮೆಚ್ಚು. ಉಕ್ರೇನ್, ರಷ್ಯಾ ಮತ್ತು ಫಿನ್ ಲ್ಯಾಂಡಿನ ಹಿನ್ನೆಲೆ ಅವಳ ಬಾಲ್ಯಕ್ಕೆ. ಎಲ್ಲವೂ ಇತ್ತು. ಆದರೆ ಅವಳು ಬಯಸಿದ್ದ ಸ್ವಾತಂತ್ರ್ಯ ಮಾತ್ರ ಕನಸಾಗಿತ್ತು. ತನಗನಿಸಿದ್ದನ್ನು ಹೇಳಬೇಕೆಂಬ ಅವಳ ಬಯಕೆಗೆ ಅಲ್ಲಿ ಜಾಗವಿರಲಿಲ್ಲ. ತನ್ನ ಸುತ್ತಲಿನ ಇತರ ಮಕ್ಕಳೊಂದಿಗೆ ಬೆರೆತು ಆಡುವ ಆಸೆಗೆ ಇಂಬಿರಲಿಲ್ಲ. ಅವಳು ಶಿಕ್ಷಣ ಪಡೆದದ್ದು ಕೂಡ ಇತರ ಮಕ್ಕಳಿಗಿಂತ ಭಿನ್ನವಾಗಿ. ಮನೆಪಾಠದ ಮೂಲಕ. ಅದರಿಂದ ಅವಳಿಗೆ ಎಷ್ಟು ನಷ್ಟವಾಯಿತೊ. ಆದರೆ, ಜಗತ್ತಿಗೊಬ್ಬ ಹೋರಾಟಗಾರ್ತಿ ಸಿಕ್ಕಿದಳು. ಅಲೆಕ್ಸಾಂಡ್ರಾಗೆ ಮನೆಪಾಠ ಹೇಳಲು ನೇಮಕವಾಗಿದ್ದವನು ಅವರ ಕುಟುಂಬ ಮಿತ್ರನೇ ಆಗಿದ್ದ ಸಾಹಿತ್ಯ ಚರಿತ್ರಕಾರ. ಆತ ಅವಳಲ್ಲಿದ್ದ ಸಾಹಿತ್ಯಿಕ ಪ್ರತಿಭೆಯನ್ನು ಗುರುತಿಸಿದ. ಬರೆಯೋದಕ್ಕೆ ಹೇಳಿದ. ಸೇನಾಧಿಕಾರಿಯ ಮಗಳು ಕೈಯಲ್ಲಿ ಲೇಖನಿ ಹಿಡಿದಳು. ಮಹಿಳಾ ಲೋಕಕ್ಕೆ ಶಕ್ತಿ ಬಂತು.

ಅಕ್ಷರಗಳ ಜೊತೆಗಿನ ಅವಳ ಸಂಬಂಧ, ಬರವಣಿಗೆಯ ಮೂಲಕ ಸಮಾಜದ ಕಡೆಗೆ ಮತ್ತು ಸಮಾಜದ ಮೂಲಕ ಬರವಣಿಗೆಯ ಕಡೆಗೆ ಸಾಗುವ ಯಾನವಾಗಿತ್ತು. ಹಲವಾರು ಶೈಕ್ಷಣಿಕ ಸಂಸ್ಥೆಗಳೊಂದಿಗೆ ಕೆಲಸ ಮಾಡುತ್ತಿದ್ದವಳು ಅತ್ಯಂತ ಬಡತನವನ್ನು ಬದುಕುತ್ತಿರುವವರ ಮನೆಯಂಗಳದ ತಲ್ಲಣಗಳನ್ನು ಕಣ್ಣಾರೆ ಕಂಡಳು. ಅದೇ ಹೊತ್ತಲ್ಲಿ ಆಕೆ ಮಾರ್ಕ್ಸ್ ವಾದವನ್ನೂ ಅಧ್ಯಯನಿಸುತ್ತಿದ್ದಳು. ಈ ದೇಶ-ಕೋಶಗಳ ಸಂಗಾತದಲ್ಲಿ, ತನ್ನ ದಾರಿ ಏನು ಎಂಬುದು ಅವಳಿಗೆ ಗೊತ್ತಾಯಿತು.

ರಷ್ಯಾದ ಯೂನಿವರ್ಸಿಟಿ ಆಫ್ ಜೂರಿಚ್ ನಲ್ಲಿ ಲೇಬರ್ ಹಿಸ್ಟರಿಯನ್ನು ಓದಿದಳು. ರಷ್ಯಾದ ಕೈಗಾರಿಕೆಗಳಲ್ಲಿ ದುಡಿವವರ ಕುರಿತ ರಾಜಕೀಯ ಪತ್ರಿಕೆಯೊಂದರಲ್ಲಿ ಲೇಖನಗಳನ್ನು ಬರೆಯತೊಡಗಿದಳು. ಮಾರ್ಕ್ಸ್ ವಾದ ಹಲವು ದಾರಿಗಳ ಮೂಲಕ ಅವಳ ಮನದ ಜಗುಲಿಗೆ ಬಂದು ಕೂತಿತು. ಅವಳ ಧೋರಣೆ ಹೊಸ ಬೆಳಕಿನಲ್ಲಿ ಪಯಣ ಶುರು ಮಾಡಿತು.

ಹೆಚ್ಚು ಕಡಿಮೆ ಈ ಹೊತ್ತಲ್ಲೇ, ಫಿನ್ ಲ್ಯಾಂಡಿನ (ಆಕೆಯ ತಾಯಿಯ ತವರು) ಜನರ ಸ್ವಾತಂತ್ರ್ಯ ಹೋರಾಟ ಅಲೆಗ್ಸಾಂಡ್ರಾಳ ಮನಸ್ಸಲ್ಲಿ ಸುಳಿಯಿತು. ಫಿನ್ ಲ್ಯಾಂಡಿನ ಶ್ರಮಿಕ ವರ್ಗ ಸಂಘಟಿತವಾಗುವುದಕ್ಕೆ ನೆರವಾಗುವುದು ತನ್ನ ಕರ್ತವ್ಯ ಅನ್ನಿಸಿತು. ಫಿನ್ ಲ್ಯಾಂಡಿನ ಜನತೆ ಮತ್ತು ರಷ್ಯಾದ ನಿರಂಕುಶಾಧಿಪತ್ಯದ ನಡುವಿನ ಸಂಘರ್ಷದ ಬಗ್ಗೆ ಬರೆಯಲಾರಂಭಿಸಿದಳು.

ರಷ್ಯಾದಲ್ಲಿ ನೂರಾರು ಕಾರ್ಮಿಕರನ್ನು ಬಲಿ ತೆಗೆದುಕೊಂಡ, “ರಕ್ತಸಿಕ್ತ ಭಾನುವಾರ” ಎಂದೇ ರಷ್ಯಾದ ಕಾರ್ಮಿಕ ಹೋರಾಟದ ಚರಿತ್ರೆಯಲ್ಲಿ ದಾಖಲಾಗಿರುವ ದುರಂತದ ಬಳಿಕ ಅಲೆಕ್ಸಾಂಡ್ರಾ ಕಾರ್ಮಿಕ ಚಳವಳಿಗೆ ತನ್ನ ಪ್ರಯತ್ನ ಆರಂಭಿಸಿದಳು. ಅದರಲ್ಲೂ ಮಹಿಳಾ ಕಾರ್ಮಿಕರನ್ನು ಸಂಘಟಿಸುವತ್ತ ಗಮನ ಕೇಂದ್ರೀಕರಿಸಿದಳು. ಈ ಹಂತದಲ್ಲಿ ಆಕೆ ರಷ್ಯಾ ಸರ್ಕಾರದ ಕೆಂಗಣ್ಣಿಗೂ ತುತ್ತಾಗಬೇಕಾಯಿತು. ರಷ್ಯಾ ಬಿಟ್ಟು ಜರ್ಮನಿಗೆ ತೆರಳುವುದು ಅನಿವಾರ್ಯವಾಯಿತು. ಮುಂದಿನ ಕೆಲ ವರ್ಷಗಳ ಕಾಲ ಹಲವಾರು ಕೃತಿಗಳನ್ನು ಬರೆದಳು. ೧೯೦೫ರಿಂದ ೧೯೦೮ರವರೆಗಿನ ಅವಧಿಯಲ್ಲಿ ಕಾರ್ಮಿಕ ಮಹಿಳೆಯರು ತಮ್ಮ ಹಿತಾಸಕ್ತಿಗಾಗಿ ಹೋರಾಟಕ್ಕಿಳಿಯುವಂತೆ ಅವರನ್ನು ಸಂಘಟಿಸುವುದಕ್ಕೆ ನಡೆಸಿದ ಆಂದೋಲನ, ಅಲೆಕ್ಸಾಂಡ್ರಾಳನ್ನು ಚರಿತ್ರೆಯ ಪುಟಗಳು ಮರೆಯಲಾರದಂತೆ ಮಾಡಿದವು. 

ಮಹಿಳೆಯ ಉಸಿರುಗಟ್ಟಿಸುವ ಪುರುಷ ರೂಪಿತ ಸಂಹಿತೆಗಳ ವಿರುದ್ಧದ ಅವಳ ಅಸಹನೆ ಹೋರಾಟವಾಗಿ ನಿಂತಿತು. ಬಾಲ್ಯದಿಂದಲೇ ವಿಲಕ್ಷಣ ಬಂಧನದ ಕಟು ನೆನಪು ಕಟ್ಟಿಕೊಂಡು ಬಂದಿದ್ದ ಆಕೆಗೆ, ಅದರ ವಿರುದ್ಧ ಪ್ರತಿಭಟಿಸುವ ಮಾರ್ಗಗಳು ತನ್ನ ವೈಯಕ್ತಿಕ ಬದುಕಿನ ಹಾದಿಯಲ್ಲೇ ಕಂಡಿದ್ದವು ಕೂಡ. ತನ್ನ ೨೧ನೇ ವಯಸ್ಸಲ್ಲಿ ತಾನೇ ಆರಿಸಿಕೊಂಡ ಹುಡುಗನೊಂದಿಗೆ ಮದುವೆಯಾದ ಆಕೆ, ತನ್ನ ಅಪ್ಪ ಅಮ್ಮನ ಇಷ್ಟದ ವಿರುದ್ಧ ಪ್ರತಿಭಟಿಸಲೆಂದೇ ಆ ಮದುವೆ ಮಾಡಿಕೊಂಡದ್ದಾಗಿ ಆಮೇಲೆ ತನ್ನ ಆತ್ಮಕಥೆಯಲ್ಲಿ ಬರೆದುಕೊಂಡಿದ್ದಾಳೆ. ಗಂಡನೆಂದರೆ ತನಗೆ ಆಮೇಲೆಯೂ ದ್ವೇಷವೇನಿರಲಿಲ್ಲ; ಆದರೆ ಗೃಹಿಣಿಯಾಗಿ, ಒಂದು ಅಧಿಕಾರ ಭಾವದ ವರ್ತುಲದಲ್ಲಿ ಬದುಕುವುದು ತನಗೆ ಪಂಜರದ ಬದುಕು ಎನ್ನಿಸಿತು ಎಂದು ಹೇಳಿಕೊಂಡಿದ್ದಾಳೆ. 

ಹಾಗೆ ನೋಡಿದರೆ, ಮೊದಲಿಂದಲೂ ಅವಳು ಧಿಕ್ಕರಿಸಿದ್ದೇ ಅಧಿಕಾರಯುತ ಲೈಂಗಿಕತೆಯನ್ನು. ಮಹಿಳೆಯನ್ನು ಲೈಂಗಿಕ ನಿರ್ಬಂಧಗಳಿಂದ ಮುಕ್ತಗೊಳಿಸುವುದು ಅಲೆಕ್ಸಾಂಡ್ರಾ ಹೋರಾಟದ ಪ್ರಧಾನ ಗುರಿಯಾಗಿತ್ತು. ಆಕೆಯ ಆತ್ಮಕಥೆಯ ಹೆಸರೇ “Autobiography of a Sexually Emancipated Communist Woman” ಎಂದಿದೆ. “ಲೈಂಗಿಕ ಬಯಕೆ ಅನ್ನುವುದು ಒಂದು ನಾಚಿಕೆಯ ಮತ್ತು ಪಾಪದ ವಿಚಾರ ಎಂಬ ಭಾವನೆ ಇಲ್ಲವಾಗಬೇಕು; ಅದು ಹಸಿವು ಮತ್ತು ನೀರಡಿಕೆಯಷ್ಟೇ ಸಹಜವಾದ ಅಗತ್ಯ ಎಂಬುದನ್ನು ಮನಗಾಣಬೇಕು” ಎಂದು ಪ್ರತಿಪಾದಿಸಿದಳು ಅಲೆಕ್ಸಾಂಡ್ರಾ. ಮುಕ್ತ ಪ್ರೇಮದ ಬಗೆಗಿನ ಅವಳ ಮಾತುಗಳು ಕೂಡ ಸಮಾಜ ಹುಬ್ಬೇರಿಸುವಂತಾಗಲು ಕಾರಣವಾಗಿದ್ದವು. ಸಾಂಪ್ರದಾಯಿಕ ಕಲ್ಪನೆಯ ಮದುವೆ ಬಗ್ಗೆಯೂ ಅವಳ ತೀವ್ರ ವಿರೋಧವಿತ್ತು.

ಫೆಮಿನಿಸಂ ಎಲ್ಲಿಂದಾದರೂ ಶುರುವಾಗಿರಲಿ, ಅಲೆಕ್ಸಾಂಡ್ರಾಳ ಮನೆಯ ಉಪ್ಪಿನ ಋಣದಿಂದ ಅದು ಮುಕ್ತವಾಗಿರಲಿಕ್ಕಂತೂ ಸಾಧ್ಯವಿಲ್ಲ!

(“ಭಾಮಿನಿ ಷಟ್ಪದಿ” ಬ್ಲಾಗಿನಿಂದ)

ಚೆನ್ನಮಲ್ಲಿಕಾರ್ಜುನನೆಂಬ ಗಂಡಂಗೆ

akka.gif

“ಸಾವಿಲ್ಲದ ಕೇಡಿಲ್ಲದ ರೂಹಿಲ್ಲದ ಚೆಲುವಂಗೆ ನಾನೊಲಿದೆ
ಎಡೆಯಿಲ್ಲದ ಕಡೆಯಿಲ್ಲದ ತೆರಹಿಲ್ಲದ ಕುರುಹಿಲ್ಲದ
ಚೆಲುವಂಗೆ ನಾನೊಲಿದೆ ಎಲೆ ಅವ್ವಗಳಿರಾ!
ಭವವಿಲ್ಲದ ಭಯವಿಲ್ಲದ ನಿರ್ಭಯ ಚೆಲುವಂಗೊಲಿದೆ ನಾನು.
ಸೀಮೆಯಿಲ್ಲದ ನಿಸ್ಸೀಮಂಗೊಲಿದೆ ನಾನು.
ಚೆನ್ನಮಲ್ಲಿಕಾರ್ಜುನನೆಂಬ ಗಂಡಂಗೆ
ಮಿಗೆ ಮಿಗೆ ಒಲಿದೆ ಎಲೆ ಅವ್ವಗಳಿರಾ!”

ಖುಷಿಯ ಗಂಟಲಲ್ಲುಳಿದ ಒಡಕು ಪದವೇ…

ಯುದ್ಧ- ಶಾಂತಿಯ ವಿರುದ್ಧದ ಪದ. ಯುದಕ್ಕೆ ಮೊದಲು ಉತ್ಸಾಹ, ನಡೆದಾದ ಮೇಲೆ ಅನಾಥ ಪ್ರಜ್ಞೆ. ಈಗ ಜಗತ್ತು ಯಾವುದೇ ಘೋಷಿತ ಯುದ್ಧದಿಂದ ಬಳಲುತ್ತಿಲ್ಲವಾದರೂ ನಡೆಯುತ್ತಿರುವ ಜಗತ್ತಿನ ಪ್ರತಿ ವಿಪ್ಲವಗಳೂ ಒಂದು ರೀತಿಯಲ್ಲಿ ಯುದ್ಧದ ರೂಪವೇ ಆಗಿ ಕಾಣುತ್ತಿವೆ.
ಯುದ್ಧಾನಂತರದ ಕುರುಕ್ಷೇತ್ರದ ಕುರಿತು ಕುವೆಂಪು `ಸ್ಮಶಾನ ಕುರುಕ್ಷೇತ್ರ’ ಬರೆದರು. ಜಗತ್ತಿನ ಯಾವುದೇ ಯುದ್ಧ ಮುಗಿಯಲಿ, ಅಲ್ಲಿ ನಮಗೆ ಕಾಣುವುದು `ಸ್ಮಶಾನ ಕುರುಕ್ಷೇತ್ರ’. ಆದರೆ ಜಗತ್ತು ಎಷ್ಟು ಯುದ್ಧಗಳನ್ನು ಕಂಡಿಲ್ಲ? ಎಷ್ಟು ಯುದ್ಧಗಳ ನಂತರ ಅದೆಷ್ಟು ಮಕ್ಕಳು ಅಪ್ಪ ಅಮ್ಮಂದಿರನ್ನು ಕಳೆದುಕೊಂಡಿಲ್ಲ? ಅಂಥ ನಿರ್ವಸಿತ, ಮಮತೆವಂಚಿತ, ದಿಕ್ಕುಗೆಟ್ಟ ಶಿಶುಗಳ ಹಣೆಯ ಮೇಲೆ, ಕಣ್ಣೀರಿಗೆ ಮಾತ್ರ ಜಾಗವಿರುವ ಅವರ ಕೆನ್ನೆಯ ಮೇಲೆ, ಅತ್ತು ಅತ್ತು ಕೆಂಪಗಾದ ಕಿವಿ, ಮೂಗಿನ, ಕೊಂಕು ತುಟಿಯ ಮೇಲೆ ಯಾರಾದರೂ ನೇವರಿಕೆ ತಂದಾರೇ?
ಇರಾನಿ ಕವಿ ಆಶಿಶ್‌ ತಾಕೂರ್‌ ತನ್ನ `ಯುದ್ಧಪೀಡಿತ ಶಿಶುವಿಗೊಂದು ಓಲೆ’ ಕವಿತೆಯಲ್ಲಿ ಅಂಥ ಮಕ್ಕಳನ್ನು ಪದಗಳಿಂದ ನೇವರಿಸಿದ್ದಾರೆ. `ಹವಳದ ಕುಡಿಯಂಥ ಅಳುವ ಕಂದನ ತುಟಿ’ಗೆ ಸಾಂತ್ವನದ ಗುಟುಕು ಹನಿಸಿದ್ದಾರೆ. ಆ ಕವಿತೆಯ ಭಾವಾನುವಾದ ಇಲ್ಲಿದೆ.

——————————

ನಿನ್ನ ಉಗುರುಬೆಚ್ಚನೆಯ ಕಣ್ಣೀರು ನನ್ನದು
ಚಿಟ್ಟೆಯಂತೆ ಫಡಫಡಿಸುವ ನನ್ನ ನಗು ನಿನ್ನದು
ಕನಸು, ಹೂಗಳ ನನ್ನೀ ಜಗತ್ತಿನಿಂದ
ನಿನಗೆ ಚಾಕೋಲೇಟುಗಳ
ಕಿನ್ನರ ಕತೆಗಳ ಕಳಿಸುವಾಸೆ;
ಮತ್ತು ಕಳಿಸುವಾಸೆ
ತಂಗಾಳಿಯ ರೆಕ್ಕೆಯ ಮೇಲೆ
ಈಗ ತಾನೇ ಕುಡಿಯೊಡೆಯುತಿರುವ
ಕಾಳುಗಳ ಗಂಧವನ್ನು.
ಆದರೆ ನಾನು ಹಂಚಿಕೊಳ್ಳಲಾರೆ,
ಒಣ ರೊಟ್ಟಿಯ ತರಹದ
ನಿನ್ನ ಹಾಳು ಪ್ರಾರಾಬವನ್ನು.

ಹಳ್ಳಿಯ ಅನಾಮಿಕ ಶಾಲೆಗಳಿಂದ
ಕುಣಿಕುಣಿದು ಬರುತ್ತಿದ್ದ ಕಿಲಕಿಲ ನಗುವೇ,
ಹೊಳೆವ ಸೂರ್ಯನಂಥ ಭವಿಷ್ಯ,
ತಣ್ಣಗಿರುವ ಬೆಳದಿಂಗಳ ಭಾಷ್ಯ-
ನಿನ್ನ ಮುಡಿಯೇರಲಿ ಮಗುವೇ.
ನೋವುಗಳ ದಾರದಲಿ ಸುರಿದ ಮುತ್ತೇ
ಬಾ ನನ್ನ ಕೊರಳಲಿ ಮಾಲೆಯಾಗು,
ಖುಷಿಯ ಗಂಟಲಲ್ಲುಳಿದ ಒಡಕು ಪದವೇ
ನನ್ನ ಕವಿತೆಯ ಆಭರಣ ತೊಟ್ಟು ನಿಲ್ಲು.

(ಕಳ್ಳಕುಳ್ಳ ಬ್ಲಾಗಿನಿಂದ)

ಇನ್ನಷ್ಟು ಸ್ಮಾರ್ಟಾದ ಕಿಚನ್ನಿಗೆ ತಯಾರಾ?

ಪೂರ್ಣಾ ಹೆಗಡೆಯವರ
ಅಪೂರ್ಣ ಕಥಾ

shahrukh

ಚೆಗೆ ನೀವು ಟೀವಿಯಲ್ಲೊಂದು ಜಾಹೀರಾತು ನೋಡಿಯೇ ಇರುತ್ತೀರಿ. ಐಸಿಐಸಿಐ ಬ್ಯಾಂಕಿಗೆ ಸಂಬಂಧಿಸಿದ್ದು. ಜಾಗತಿಕ ಅರ್ಥ ವ್ಯವಸ್ಥೆ ದಿಕ್ಕೆಟ್ಟಂತಾಗಿರುವ ಬಳಿಕ ಕೆಲ ದಿನಗಳ ಹಿಂದೆ ನಮ್ಮಲ್ಲಿ ಒಂದು ವದಂತಿ ರಾತ್ರೋ ರಾತ್ರಿ ಹುಟ್ಟಿಕೊಂಡಿತು. ಐಸಿಐಸಿಐ ಬ್ಯಾಂಕ್ ದಿವಾಳಿ ಎದ್ದುಹೋಗಿದೆ ಎಂಬ ವದಂತಿ ಅದು. ಬ್ಯಾಂಕಿನಲ್ಲಿ ದುಡ್ಡಿಟ್ಟ ಅನೇಕ ಮಂದಿ ಎದ್ದೂ ಬಿದ್ದೂ ಹೋಗಿ ಇದ್ದ ದುಡ್ಡನ್ನೆಲ್ಲಾ ಡ್ರಾ ಮಾಡಿಕೊಂಡು ಬಂದರು. ತನ್ನ ಗ್ರಾಹಕರು ಈ ಪರಿ ಪ್ಯಾನಿಕ್ ಆದದ್ದಕ್ಕೆ ಬ್ಯಾಂಕ್ ಆಡಳಿತ ಕಂಗೆಟ್ಟದ್ದಂತೂ ನಿಜ. ಒಂದರ ಬೆನ್ನಿಗೊಂದರಂತೆ ಅದು ಸ್ಪಷ್ಟನೆಗಳನ್ನು ಕೊಟ್ಟಿತು. ಸ್ವತಃ ರಿಸರ್ವ್ ಬ್ಯಾಂಕೇ ನಥಿಂಗ್ ಟು ವರಿ ಎಂದಿತು. ಪ್ರಧಾನಿಯೇ ಮಾತಾಡಿದರು. ಒಂದು ಹಂತದಿಂದ ಎಲ್ಲಾ ಸ್ವಲ್ಪ ಸರಿಹೋಯಿತು.

ವಿಷಯ ಅದಲ್ಲ. ಐಸಿಐಸಿಐ ಬ್ಯಾಂಕ್ ಈಗ ತನ್ನನ್ನು ಜನ ನಂಬುವಂತೆ ನಟ ಶಾರುಖ್ ಖಾನ್ ಮೂಲಕ ಹೇಳಿಸುತ್ತಿದೆ. ಟೀವಿ ಪರದೆಯ ಮೇಲೆ ಕಾಣಿಸಿಕೊಳ್ಳುವ ಶಾರುಖ್, ಸಂಬಂಧದ ಮಂತ್ರ ಪಠಿಸುತ್ತಾನೆ. ತನಗೆ ಐಸಿಐಸಿಐ ಬ್ಯಾಂಕಿನೊಂದಿಗೆ ಉತ್ತಮ ಸಂಬಂಧವಿದೆ ಎಂದೆಲ್ಲಾ ಹೇಳುತ್ತಾನೆ. ಜನರು ನಂಬುತ್ತಾರೊ ಬಿಡುತ್ತಾರೊ. ಆದರೆ ಜನರು ಖಂಡಿತ ನಂಬುತ್ತಾರೆ ಎಂಬ ನಂಬಿಕೆ ಐಸಿಐಸಿಐ ಬ್ಯಾಂಕಿನ ಆಡಳಿತ ಮಂಡಳಿಗಂತೂ ಇದ್ದೇ ಇದೆ.

ಮತ್ತೆ ನಿಜವಾಗಿಯೂ ತಮಾಷೆ ಏನೆಂದರೆ, ಜನರು ಇದನ್ನೇ ನಂಬುತ್ತಾರೆ!

ಕೋಟ್ಯಂತರ ವಹಿವಾಟಿನ ಯಾವುದೇ ಕಂಪನಿ ಸುಮ್ಮನೆ ತಲೆಕೆಟ್ಟು ಕೋಟಿಗಟ್ಟಲೆ ಕೊಟ್ಟು ಯಾವುದೇ ಸೆಲೆಬ್ರಿಟಿಯನ್ನು ತನ್ನ ಅಂಬಾಸಿಡರ್ ಎಂದು ನೇಮಿಸುವುದಿಲ್ಲ. ಯಾರ ಮಾತೆಂದರೆ ವೇದ ಎಂದು ಜನ ನಂಬುತ್ತದೆ ಎಂಬುದು ಕಂಪನಿಗೆ ಗೊತ್ತಿರುತ್ತದೆ. ಜೂಹಿ ಚಾವ್ಲ ಮತ್ತು ಕರೀನಾ ಕಪೂರ್ ಮಧ್ಯೆ ಆರಿಸಿಕೊಳ್ಳಬೇಕಾಗಿ ಬಂದರೆ ಹೆಚ್ಚು ಡಿಮ್ಯಾಂಡಿರುವ ಕರೀನಾಳೇ ಯಾವುದೇ ಕಂಪನಿಯ ಆಯ್ಕೆ. ಅವಳು ಎಷ್ಟೇ ಡಿಮ್ಯಾಂಡು ಮಾಡಿದರೂ ಲಾಭ ಹುಟ್ಟುವುದರ ಬಗ್ಗೆ ಕಂಪನಿಗೆ ಖಾತ್ರಿಯಿರುತ್ತದೆ.

ಆದರೆ, ಜನರು ನಿಜವಾಗಿಯೂ ಈ ಸೆಲೆಬ್ರಿಟಿಗಳ ಮಾತು ನಂಬುತ್ತಾರಾ?

ನಾವಿದನ್ನೆಲ್ಲ ಚಿಂತಿಸುತ್ತಾ ಲೆಕ್ಕದಲ್ಲಿ ನಾವೆಷ್ಟು ವೀಕು ಎಂಬುದನ್ನು ಜಗತ್ತಿಗೇ ತೋರಿಸಿಕೊಳ್ಳುತ್ತಿರುವಾಗ ಅಲ್ಲೆಲ್ಲೋ ಕೋಟ್ಯಂತರದ ವ್ಯವಹಾರವಾಗಿರುತ್ತದೆ. ವ್ಯವಹಾರದ ಜಾದುವೇ ಅದು. ಜನರ ನಂಬಿಕೆ, ಅಪನಂಬಿಕೆಗಳ ಮಧ್ಯೆಯೇ ಅದು ತನ್ನ ಯಶಸ್ಸಿನ ಹಾದಿ ಹುಡುಕಿಕೊಂಡಿರುತ್ತದೆ. ಓಡಿ ಹೋಗುತ್ತಿರುವವನ ಕಡೆಯಿಂದ ಕಿತ್ತುಕೊಂಡಷ್ಟೇ ಬಂತು ಎಂಬ ಪಕ್ಕಾ ಮಟೀರಿಯಲಿಸ್ಟಿಕ್ ಥಿಯರಿ ಅದರದ್ದು.

ಇನ್ನೊಂದು ಜಾಹೀರಾತಿನ ಕಥೆ ಹೇಳಿಬಿಡುತ್ತೇನೆ. ಅದ್ಯಾವಳೋ ನಟಿಯೊ ಮಾಡೆಲ್ಲೊ ಗೊತ್ತಿಲ್ಲ. ಜಾಹೀರಾತಲ್ಲಿ ಅವಳು ಎರಡೂ ಕೈಗಳಲ್ಲಿ ಚಿಟಿಕೆ ಹೊಡೀತಾನೇ, ಚಿಟಿಕೆ ಹೊಡೆಯೋವಷ್ಟರಲ್ಲಿ ಅನ್ನೋ ಥರಾ ಪಟಪಟಾಂತ ಅಡುಗೆ ಮುಗಿಸಿಬಿಡ್ತಾಳೆ. ಗಂಡನಿಗೆ, ಅತ್ತೆಗೆ, ಮಾವನಿಗೆ, ಗಂಡನ ತಮ್ಮಂದಿರು, ತಂಗಿಯರಿಗೆ. ವ್ಹಾ ಅನ್ನಿಸಿಬಿಡಬೇಕು ನೋಡುತ್ತ ಕೂತವರಿಗೆ. ನೀವೂ ಕೂಡ ಇನ್ನಷ್ಟು ಸ್ಮಾರ್ಟಾದ ಕಿಚನ್ನಿಗೆ ತಯಾರಾ ಅನ್ನುವ ಬಗೆಯಲ್ಲಿ ಅವಳ ವೈಯಾರದ ನೋಟ. ಆದರೆ ಇಲ್ಲಿ ವಾಸ್ತವದಲ್ಲಿ ನಿಜವಾಗಿಯೂ ಅಷ್ಟೊಂದು ಮಂದಿಗೆ ಅಡುಗೆ ಮಾಡುತ್ತಿರುವವಳ ಸೊಂಟ ಬಿದ್ದುಹೋಗಿರುತ್ತದೆ.

ನಮ್ಮ ಎಷ್ಟೋ ಅಡುಗೆ ಮನೆಗಳ ಮಹಾತ್ಮೆಯೇ ಹೀಗೆ. ಅಲ್ಲಿ ದುಡಿಯುವವಳು ಒಂದು ಸೊಲ್ಲನ್ನೂ ಎತ್ತಕೂಡದು. ಅಷ್ಟರ ಮಟ್ಟಿಗೆ ದುಡಿಸಿಬಿಡುತ್ತದೆ ಅಡುಗೆಮನೆ. ಅಷ್ಟು ಹೈರಾಣಾದವಳು ಇನ್ನೂ ಸ್ಮಾರ್ಟಾದ ಕಿಚನ್ನಿಗೆ ತಯಾರಾಗದೆ ಇನ್ನೇನು ಮಾಡಿಯಾಳು ಪಾಪ!

ಇಷ್ಟಕ್ಕೇ ಮುಗೀತು ಎಂದುಕೊಂಡಿರಾ? ಇಲ್ಲ ಮಾರಾಯರೆ…

ಹಾಡುಗಳ ಒಳಗೊಮ್ಮೆ ಕಳೆದುಹೋಗಿ…

rain

ವೈಶಾಲಿ

ವತ್ತು ನನ್ನ ಬಾಲ್ಕನಿಯಲ್ಲಿ ಬೆಚ್ಚನೆ ಭಾವಗಳ ತುಂತುರು…

ಹಮ್ ತೋ ಹೇ ಪರದೇಸ್ ಮೇ
ದೇಸ್ ಮೇ ನಿಖಲಾ ಹೋಗಾ ಚಾಂದ್
ಅಪನೀ ರಾತ್ ಕಿ ಛತ್ ಪರ್ ಕಿತನಾ
ತನ್ಹಾ ಹೋಗಾ ಚಾಂದ್……………
ನನ್ನ ನೆಚ್ಚಿನ ಗಾಯಕ ಜಗಜೀತ್ ಸಿಂಗ್ ಒಂದೊಂದು ಹಾಡಿನಲ್ಲೂ ಒಂದೊಂದು ನೆನಪುಗಳನ್ನು ಕಟ್ಟಿಕೊಡುತ್ತಾನೆ. ಹಾಡುಗಳನ್ನು ಕೇಳುತ್ತಾ ಕುಳಿತರೆ ಮನದೊಳಗೆ ಸದ್ದಿಲ್ಲದ ಸಂಭ್ರಮ. ನೆನಹುಗಳ ಸರಪಳಿ..ಒಮ್ಮೆ ಕಣ್ಣ0ಚಿನಲ್ಲಿ ಹನಿ ನೀರಾದರೆ ಇನ್ನೊಮ್ಮೆ ಇವೆಲ್ಲ ನನ್ನದೇ ಭಾವಗಳೆಂಬ ಆಪ್ತತೆ.

ಎಷ್ಟೆಲ್ಲ ದಿನಗಳೇ ಕಳೆದುಹೋದವು ನಾನು ಕೂಡ ದೇಶ ಬಿಟ್ಟು ಬಂದು… ಕಳೆದ ಜಡಿಮಳೆಗೆ ಕೈಯೊಡ್ಡಿ ಕನಸುಗಳನ್ನು ಹೆಕ್ಕುತ್ತ ಕುಳಿತುಕೊಳ್ಳುತ್ತಿದ್ದ ನಾನು ಈಗ ಇಲ್ಲಿನ ಕೊರೆಯುವ ಚಳಿಗೆ ಮೈ ಮನಸುಗಳನ್ನೆಲ್ಲ ತಣ್ಣಗಾಗಿಸಿಕೊಳ್ಳುತ್ತ ಒದ್ದಾಡುತ್ತಿದ್ದೇನೆ.
ಹಬ್ಬಗಳೆಲ್ಲ ಒಂದೊಂದಾಗಿ ಸರಿದುಹೋದವು. ಮಳೆಗಾಲ ಹನಿಗಳನ್ನು ಖಾಲಿಯಾಗಿಸಿಕೊಂಡು ತಣ್ಣಗಿನ ಇಬ್ಬನಿಗೆ ದಾರಿ ಮಾಡಿಕೊಟ್ಟಾಯಿತು. ಊರಿನ ಜಗುಲಿಗಳಲ್ಲಿ ಈಗ ಅಡಿಕೆಯ ಸಿಪ್ಪೆಗಳ ಘಮವಿರಬಹುದು… ಮನೆಯ ಹಿಂದಿನ ಹೊಡಚಲಿನ ಬಿಸಿಯಿನ್ನೂ ಆರಿರಲಿಕ್ಕಿಲ್ಲ.. ಮಳೆ ಜಿರಳೆಗಳೂ ಮೌನದ ಮೊರೆ ಹೋಗಿವೆಯೇನೋ…
ಎಲ್ಲವೂ ಸರದಿಯಂತೆ ಮಾತಿಲ್ಲದೆ ಸಾಗುತ್ತಿವೆ. ಕಳೆದುಕೊಂಡ ಚಡಪಡಿಕೆ ನನ್ನದು ಮಾತ್ರವೇನೋ ಎಂದನಿಸಿ ನಾನು ಸುಮ್ಮನಾಗುತ್ತೇನೆ.

ಚಾಂದ್ ಬಿನಾ ಹರ ದಿನ್ ಯೂಹಿ ಬೀತಾ
ಜೈಸೆ ಯುಗ್ ಬೀತೇ
ಮೇರಾ ಬಿನಾ ಕಿಸ್ ಹಾಲ್ ಮೇ ಹೋಗಾ
ಕೈಸಾ ಹೋಗಾ ಚಾಂದ್..
ಬಿಟ್ಟು ಬಂದಿದ್ದು ನಾನು. ಮನೆಯಂಗಳದಲ್ಲಿ ಪಾದದ ಗುರುತಿನ್ನೂ ಆರದಿರುವ ಮುನ್ನವೇ ಇನ್ನೊಂದು ಹಸಿರ ಅಂಗಳದಲ್ಲಿ ನನ್ನ ಹೆಜ್ಜೆ ಗುರುತು ಮೂಡಿಸಲು ಹೊರಟಿದ್ದೇನೆ. ತಿರುಗಿ ನೋಡುತ್ತ ಹನಿಗಣ್ಣಾದರೆ ದಾರಿ ಮಸುಕಾದೀತಲ್ಲವೇ… ಮನಸು ಸಂತೈಸುತ್ತದೆ…
ಕಣ್ಣು ಮುಚ್ಚಾಲೆಯಾಡಿದ ಜಗುಲಿಯ ಸರಳುಗಳ ಹಿಂದೆ ನಿಂತಾಗ ಇದೇ ಹಾಡು ನನ್ನ ಹುಡುಗನ ನೆನಪು ತಂದಿತ್ತಲ್ಲವೇ… ಈಗ ಅದೇ ಹಾಡು ನನ್ನನ್ನು ಮರಳಿ ಮನೆಯಂಗಳಕ್ಕೆ ಕೊಂಡಿಯಾಗಿಸುತ್ತಿದೆ….

ಜಗಜಿತ್ ರ ಹಾಡುಗಳ ಶಕ್ತಿಯೇ ಅದು. ಯಾರದೋ ನೋವು, ಯಾರದೋ ದುಖಃ, ಯಾವುದೋ ಚಡಪಡಿಕೆ, ಮತ್ತಾರದೋ ಖುಷಿ ಎಲ್ಲವನ್ನೂ ತನ್ನದೇ ಎಂಬಂತೆ ಅನುಭವಿಸಿ ಹಾಡುವ ಅವರದ್ದು ಒಂದು ರೀತಿಯ ಪರಕಾಯ ಪ್ರವೇಶವೇ ಅನ್ನಿಸುತ್ತದೆ ನನಗೆ. ಎದೆಯತ್ತರದ ಮಗನನ್ನು ಕಳೆದುಕೊಂಡೂ, ಅದೇ ಬೇಸರದಲ್ಲಿ ಹಾಡು ನಿಲ್ಲಿಸಿದ ಮಡದಿಯನ್ನು ಸಂತೈಸುತ್ತಲೇ ಮತ್ತೆ ಗಜ್ಹಲ್ ಗಳ ನಡುವೆ ಬಂದು ನಿಂತವರು ಜಗಜಿತ್. ಎಲ್ಲವನ್ನೂ ಮನದೊಳಗೇ ಮುಚ್ಚಿಟ್ಟು ಪ್ರೀತಿಯ ಹಾಡುಗಳಿಗೆ ಜೀವ ತುಂಬಿದವರು..ವಿರಹದ ಸಾಲುಗಳಿಗೆ ಧ್ವನಿಯಾದವರು……. ನನ್ನಲ್ಲಿ ನಾನು ಕಳೆದುಹೋಗುವಂತೆ ಮಾಡುವ ಗಜ್ಹಲ್ ಗಳಿಗೆ, ಅದಕ್ಕೆ ಜೀವ ತುಂಬುವ ಜಗಜಿತ್ ರ ಕಂಠಕ್ಕೆ hats off!

ಬೀತೇ ಲಮ್ಹೇ ಕುಚ್ ಐಸೆ ಹೇ
ಖುಷ್ಬೂ ಜೈಸೆ ಹಾತ್ ನ ಆಯೇ …
ಕೋಯಿ ಮೌಸಮ್ ಐಸಾ ಆಯೇ
ಉಸಕೋ ಅಪನೀ ಸಾಥ್ ಜೋ ಲಾಯೇ….
ಎಲ್ಲ ಬಿಟ್ಟು ಬಂದರೂ ಇಲ್ಲಿ ಮತ್ತಾವುದೋ ಜೊತೆಯಾಗುತ್ತದೆ. ಸುತ್ತ ಬೀಳುವ ಹಿಮ ಹೊಸ ಜಗತ್ತು ಕಣ್ಣಲ್ಲಿಡುತ್ತದೆ. ಹುಷಾರಾಗಿ ಹೋಗಿ ಬಾ ಎಂದು ಬಸ್ಸು ಹತ್ತಿಸುತ್ತಿದ್ದ ಅಪ್ಪ ಅಮ್ಮನ ನೆನಪು ಟ್ರಾಲಿಯಲ್ಲಿ ಕುಳಿತು ಅಮ್ಮನೊಂದಿಗೆ ಸಾಗುವ, ಅಪ್ಪನೊಂದಿಗೆ ವಾಕಿಂಗು ಬರುವ ಇಲ್ಲಿನ ಮುದ್ದು ಮಕ್ಕಳನ್ನು ನೋಡಿದಾಗ ಸ್ವಲ್ಪವಾದರೂ ಮರೆಯಾಗುತ್ತದೆ… ಒಂಟಿಯಾಗಿ, ನಿರಾತಂಕವಾಗಿ ಓಡಾಡುವ ಅಜ್ಜ, ಅಜ್ಜಿಯರು ಖುಷಿ ಹುಟ್ಟಿಸುತ್ತಾರೆ.. ಪಿಜ್ಜಾ, ಬರ್ಗರ್ ಗಳ ಸಪ್ಪೆ ರುಚಿ ಮನೆಯ ದೊಸೆಯಷ್ಟಲ್ಲದಿದ್ದರೂ ಪರವಾಗಿಲ್ಲ…… ಏನೇ ಅಂದುಕೊಳ್ಳಲಿ, ಬಿಡಲಿ ಈ ದೇಶ ನನ್ನನ್ನು ತನ್ನ ತೆಕ್ಕೆಯೊಳಗೆ ಎಳೆದುಕೊಂಡಾಗಿದೆ!

ಆದರೂ….
ಜಿಸ್ಮ್ ಕೆ ಬಾತ್ ನಹಿ ಥೀ ಉನ್ಕೆ
ದಿಲ್ ತಕ ಜಾನಾ ಥಾ
ಲಂಬೀ ದೂರಿ ತೈರ ಕರ್ ನೆ ಮೇ
ವಕ್ತ್ ತೋ ಲಗತಾ ಹೇ…
………………………………..
ಲಾಖ್ ಕರೆ ಖೋಶಿಷ್ ಖುಲನೆ ಮೇ
ವಕ್ತ್ ತೋ ಲಗತಾ ಹೇ…..

(ವೈಶಾಲಿಯವರ ಕೆನೆಕಾಫಿ ಬ್ಲಾಗಿನಿಂದ)

ಗೆದ್ದವನ ಎದೆಯೊಳಗೆ ಅಜ್ಜಿಯ ಚಿತ್ರ!

ಆಫ್ಟರ್ ದಿ ಬ್ರೇಕ್
————–
ಸ್ವಲ್ಪ ಸುದ್ದಿ, ಸ್ವಲ್ಪ ಮಾತು

obama

“ಅಮೆರಿಕಕ್ಕೆ ಬದಲಾವಣೆ ಬಂತು!”

ತನ್ನನ್ನು ಶ್ವೇತಭವನದ ಪರಮೋಚ್ಚ ಹುದ್ದೆಗಾಗಿ ಆರಿಸಿದ ಜನತೆಯ ಮುಂದೆ ಬರಾಕ್ ಒಬಾಮ ಆಡಿದ ಮೊದಲ ಮಾತು ಇದು. ಚಿಕ್ಯಾಗೋದಲ್ಲಿ ಲಕ್ಷಾಂತರ ಬೆಂಬಲಿಗರ ರ್‍ಯಾಲಿಯಲ್ಲಿ “ಇದು ನಿಮ್ಮ ವಿಜಯ” ಎಂದು ಒಬಾಮ ಹೇಳಿದಾಗ ಹರ್ಷೋದ್ಘಾರಗಳ ಕಾರಂಜಿಯೇ ಚಿಮ್ಮಿಬಂತು.

ಒಬಾಮ ಅಮೆರಿಕದ ಅಧ್ಯಕ್ಷ ಪದವಿಗೇರುತ್ತಿರುವ ಮೊದಲ ಆಫ್ರಿಕನ್ ಅಮೆರಿಕನ್. ಹಾಗಾಗಿ, ಒಬಾಮ ವಿಜಯ ಅಮೆರಿಕದ ಜನಾಂಗೀಯ ಇತಿಹಾಸದ ಮುಖವನ್ನೇ ಬದಲಿಸಿದ ಒಂದು ಮಹತ್ವದ ಜಾಗತಿಕ ಬೆಳವಣಿಗೆ. ನಾಗರಿಕ ಹಕ್ಕುಗಳ ಚಳವಳಿಯ ಇತಿಹಾಸದೆಡೆಗೆ ಒಮ್ಮೆ ನೋಡಿದರೆ ಶ್ವೇತಭವನದೆಡೆಗಿನ ಒಬಾಮ ಹೆಜ್ಜೆಯ ಹೆಚ್ಚುಗಾರಿಕೆ ಅರ್ಥವಾಗುತ್ತದೆ. ೫೩ ವರ್ಷಗಳಷ್ಟು ಹಿಂದೆ ರೋಸಾ ಪಾರ್ಕ್ಸ್ ಎಂಬ ಆಫ್ರಿಕನ್ ಅಮೆರಿಕನ್ ಮಹಿಳೆ ಅಲಬಾಮದ ಮೊಂಟ್ಗೊಮೆರಿಯಲ್ಲಿ ತಾನು ಕುಳಿತಿದ್ದ ಬಸ್ಸಿನ ಸೀಟನ್ನು ಬಿಳಿಯನಿಗೆ ಬಿಟ್ಟುಕೊಡಲು ನಿರಾಕರಿಸಿದಲ್ಲಿಂದ ಶುರುವಾದ ಸುದೀರ್ಘ ಹೋರಾಟ ಅದು. ಅಮೆರಿಕದ ಜನಾಂಗೀಯ ಭೇದದ ವಿರುದ್ಧ ರೋಸಾ ಹಾಗೆ ಸಿಡಿದ ಕ್ಷಣವೇ ನಾಗರಿಕ ಹಕ್ಕುಗಳ ಚಳವಳಿಯ ಮುಹೂರ್ತವಾಯಿತು. ೧೯೬೩ರಲ್ಲಿ ವಾಷಿಂಗ್ಟನ್ನಿನಲ್ಲಿ ಮಾರ್ಟಿನ್ ಲೂಥರ್ ಕಿಂಗ್ ಮಾಡಿದ ಐತಿಹಾಸಿಕ ಭಾಷಣದ ಬೀಜಗಳು ಕೂಡ ಆ ಗಳಿಗೆಯ ಒಡಲಾಳದಿಂದಲೇ ಬಂದವು. ಇಂಥ ಹಾದಿಯಲ್ಲಿ ಒಬಾಮ ಗೆಲುವು ಅದೆಷ್ಟೋ ತಲೆಮಾರುಗಳ, ಹೆಜ್ಜೆಹೆಜ್ಜೆಗೂ ಕ್ರೌರ್ಯ ಮತ್ತು ಶೋಷಣೆಯ ಕರಾಳವನ್ನೇ ಕಂಡ ಸಮುದಾಯದ ಕನಸಿಗೆ ಒದಗಿಬಂದ ಜೀವವಾಗಿ ಕಾಣಿಸಿದರೆ ಅಚ್ಚರಿಯಲ್ಲ.

ಸರಿಸುಮಾರು ೧೭ನೇ ಶತಮಾನದ ಆರಂಭದಲ್ಲಿ ಉತ್ತರ ಅಮೆರಿಕಾ ಎಂಬ ನರಕಕ್ಕೆ ಬಂದುಬಿದ್ದ ಆಫ್ರಿಕನ್ನರು ಅಮೆರಿಕನ್ನರ ಗುಲಾಮರಾಗಿ ಸವೆಸಿದ ಬದುಕು ಬಲು ಶೋಚನೀಯವಾದದ್ದು. ಅಮೆರಿಕ ಅವರನ್ನು ಯಾವ ಪರಿ ದುಡಿಸಿತೆಂದರೆ, ಕ್ರಮೇಣ ಗುಲಾಮಗಿರಿ ವ್ಯವಸ್ಥೆ ಇಡೀ ಅಮೆರಿಕದ ಆರ್ಥಿಕ ವ್ಯವಸ್ಥೆಯ ಪ್ರಧಾನ ಆಧಾರಸ್ತಂಭವೇ ಆಗಿಬಿಟ್ಟಿತ್ತು. ಕಡೆಗೂ ೧೮೬೫ರ ನಾಗರಿಕ ಯುದ್ಧದ ಬಳಿಕ ಗುಲಾಮಗಿರಿ ಪದ್ಧತಿ ಅಂತ್ಯ ಕಂಡಿತಾದರೂ ಅವರ ಬದುಕೇನೂ ಹಸನಾಗಲಿಲ್ಲ. ಕಪ್ಪು ಜನರ ಬಗ್ಗೆ ಭೇದವೆಣಿಸುವ ಅಮೆರಿಕನ್ನರ ಜಾಯಮಾನ ಕೊನೆಗಾಣಲಿಲ್ಲ. ಶಿಕ್ಷಣ, ಆರ್ಥಿಕ ಅವಕಾಶ ಇವೆಲ್ಲವುಗಳಿಂದ ವಂಚಿತರಾದ ಕರಿಯರ ದಾರಿಗೆ ಕೊಂಚ ತಂಪಿನ ಆಸರೆ ಸಿಕ್ಕಿದ್ದು ಕಪ್ಪು ಜನರ ಪಾಲಿಗೆ ಹಕ್ಕುಗಳನ್ನು ಒದಗಿಸಿಕೊಡುವಲ್ಲಿ ನಾಗರಿಕ ಹಕ್ಕುಗಳ ಚಳವಳಿ ಗೆದ್ದಾಗ. ಆಗ ಕರಿಯರಿಗೆ ಮತದಾನದ ಹಕ್ಕು ಬಂತು. ಸಾರ್ವಜನಿಕ ಸೇವಾ ಕ್ಷೇತ್ರ ಅವರ ಪಾಲಿಗೂ ತೆರೆದುಕೊಂಡಿತು.

ಇಷ್ಟಾದ ಮೇಲೂ ಅವರ ಮನಸ್ಸಿನ ಆಳದಲ್ಲಿನ ಗಾಯಗಳು ಮಾಯವಾಗಿವೆಯೇ ಎಂದರೆ, ಉತ್ತರ “ಇಲ್ಲ” ಎಂಬುದೇ ಆಗಿದೆ. ಅಮೆರಿಕದ ಜನಸಂಖ್ಯೆಯ ಶೇ.೧೩ರಷ್ಟಿರುವ ಕಪ್ಪು ವರ್ಣೀಯರು ಅಲ್ಲಿನ ಅರ್ಥ ವ್ಯವಸ್ಥೆಗೆ ಬಹು ದೊಡ್ಡ ಕೊಡುಗೆ ನೀಡುತ್ತಿದ್ದಾರೆ. ದುಃಖದ ಸಂಗತಿಯೆಂದರೆ, ಸ್ವತಃ ಅವರಲ್ಲೇ ಅದೆಷ್ಟೋ ಮಂದಿ ಮಾತ್ರ ಇಂದಿಗೂ ಬಾಳುತ್ತಿರುವುದು ನಿಕೃಷ್ಟವಾದ ಬದುಕನ್ನೇ. ಶೇ. ೪೫ರಷ್ಟು ಮಂದಿ ಜೈಲಲ್ಲೇ ಕೊಳೆಯುತ್ತಿದ್ದಾರೆ.

ಇಂಥ ದುರಂತ ಕಥೆಯನ್ನು ಬೆನ್ನಿಗೆ ಕಟ್ಟಿಕೊಂಡಿರುವ ಕರಿಯರ ಪಾಲಿಗೆ, ಒಬಾಮ ಗೆಲುವು ಅವರ ಜೀವಮಾನದಲ್ಲೇ ಅವಿಸ್ಮರಣೀಯ ಸಂಗತಿ. ಆದರೂ, ತಲೆಮಾರುಗಳಿಂದ ಆಗದ್ದನ್ನು ಒಬಾಮ ನಾಲ್ಕು ವರ್ಷಗಳಲ್ಲಿ ಸಾಧ್ಯವಾಗಿಸುವರೆಂಬ ಭ್ರಮೆಯಲ್ಲೂ ಆಫ್ರಿಕನ್ ಅಮೆರಿಕನ್ನರು ತೇಲುತ್ತಿಲ್ಲ. ಕಪ್ಪು ವರ್ಣೀಯ ಅಧ್ಯಕ್ಷ ಎಂದೊಡನೆ ಅವನೇನು ಮಾಂತ್ರಿಕನಲ್ಲವೆಂಬ ಒಂದು ಎಚ್ಚರ, ಆಳದಲ್ಲಿ ಕಾಡುತ್ತಿರುವ ಹತಾಶೆಯೊಂದಿಗೇ ಅವರೊಳಗೆ ಇದೆ.

* * *

ಇದೇನೇ ಇದ್ದರೂ, ಒಬಾಮ ಸುಲಭವಾಗಿ ಮಣಿಯದ ಉತ್ಸಾಹಿ ಎಂಬುದಂತೂ ನಿಜ. ಪ್ರಚಾರದ ವೇಳೆಯಲ್ಲಿ ಆತ ತನ್ನ ಪತ್ನಿ ಮತ್ತು ಇಬ್ಬರು ಪುಟ್ಟ ಹೆಣ್ಣುಮಕ್ಕಳ ಜೊತೆ ಕಾಣಿಸಿಕೊಳ್ಳುತ್ತಿದ್ದ ಚಿತ್ರವೇ ಎದುರಿದ್ದವರಿಗೆ ಚೈತನ್ಯ ಬಡಿಸುವಷ್ಟು ಉಮೇದಿನಲ್ಲಿರುತ್ತಿತ್ತು.

ಪ್ರಚಾರದ ಉದ್ದಕ್ಕೂ ಒಬಾಮ ಆಡಿದ್ದು ಬದಲಾವಣೆಯ ಮಾತು. ಪ್ರತಿಸ್ಪರ್ಧಿ ಮೆಕೇನ್ ಬೆಂಬಲಕ್ಕಾಗಿ ದೇಹಿ ಎನ್ನುತ್ತಿರುವಾಗ, ಒಬಾಮ ಬದಲಾವಣೆ ಬದಲಾವಣೆ ಎಂದು ಹಂಬಲಿಸುತ್ತಿದ್ದರು. ಅದರಲ್ಲೊಂದು ಶುದ್ಧ ಕಳಕಳಿ ಇದ್ದಿರಲೇಬೇಕು ಎಂದೇ ಅನ್ನಿಸುತ್ತದೆ. ಇದು ನಿಜವೇ ಆಗಿದ್ದಲ್ಲಿ, ಒಬಾಮ ಗೆಲುವು ಅಮೆರಿಕದ ಮಟ್ಟಿಗೆ ನೈತಿಕತೆಯ ಹೊಸ ಶಕೆ ಕೂಡ ಆಗಬಲ್ಲುದು.

ಒಬಾಮ ಗೆಲುವನ್ನು ನೆಲ್ಸನ್ ಮಂಡೇಲಾ ಬಣ್ಣಿಸಿರುವುದು ಹೀಗೆ: “ಜಗತ್ತನ್ನು ಸುಂದರಗೊಳಿಸಬೇಕೆಂದು ಕನಸು ಕಾಣುತ್ತಿರುವ ಎಲ್ಲರ ಪಾಲಿಗೂ ಇದು ಆಶಾದಾಯಕ ಸಂಕೇತ.”

ಮಂಡೇಲಾರಂಥ ಹಿರಿಯ ನಾಯಕನೊಬ್ಬನ ಗ್ರಹಿಕೆ ತಪ್ಪಾಗದಿದ್ದರೆ, ಒಬಾಮ ಶಕ್ತಿಗೆ ಮಾಂತ್ರಿಕತೆಯ ಸ್ಪರ್ಶವಾಗಲೂಬಹುದು.

* * *

ಒಬಾಮ ಗೆಲ್ಲುತ್ತಿದ್ದಂತೆ ಭಾರತದಲ್ಲೂ ನಿರೀಕ್ಷೆಗಳು ಚಿಗುರಿವೆ. ಪ್ರಚಾರದ ಸಮಯದಲ್ಲಿ ತನ್ನ ಬಳಿ ಆಂಜನೇಯನ ಪುಟ್ಟ ವಿಗ್ರಹ ಇಟ್ಟುಕೊಂಡಿದ್ದರೆಂಬ ಕಾರಣದಿಂದಾಗಿ ಸುದ್ದಿ ಮಾಡಿದ್ದರು ಒಬಾಮ. ಅದು ಅವರ ರಾಜಕೀಯ ಗಿಮಿಕ್ಕೇನೂ ಆಗಿರಲಾರದು. ತನ್ನ ಕಚೇರಿಯಲ್ಲಿ ಗಾಂಧಿಯ ಭಾವಚಿತ್ರ ಇರಿಸಿಕೊಂಡವರು ಒಬಾಮ. ಜನಸಾಮಾನ್ಯರನ್ನು ಒಟ್ಟುಗೂಡಿಸಿ ಅವರಿಂದ ಅಸಾಧಾರಣವಾದದ್ದನ್ನು ಮಾಡಿಸಿದ ಗಾಂಧಿ ತನ್ನ ಪಾಲಿನ ಪ್ರೇರಕ ಶಕ್ತಿ ಎಂಬ ಮಾತನ್ನು ಒಬಾಮ ಮತ್ತೆ ಮತ್ತೆ ಹೇಳಿದ್ದಾರೆ. ತನ್ನ ಬದುಕಿಗೆ, ಧೋರಣೆಗೆ ಆಕಾರ ಕೊಟ್ಟ ಅಜ್ಜಿಯನ್ನು, ಗೆದ್ದ ಕ್ಷಣದಲ್ಲೇ ನೆನೆದ ಒಬಾಮ ಮನಃಸ್ಥಿತಿ ಭಾರತೀಯವಾದದ್ದಕ್ಕೆ ಬಲು ಹತ್ತಿರವಾಗೇ ಕಾಣಿಸುತ್ತದೆ. 

ನಮ್ಮ ರಾಜಕಾರಣಿಗಳೆಲ್ಲ ಒಂದು ಕ್ಷಣವಾದರೂ ರಾಜಕಾರಣವನ್ನು ಮರೆತು ಒಬಾಮ ಶಕ್ತಿಯ ಬಗ್ಗೆ, ಆತನ ಮನಸ್ಸಿನ ಬಗ್ಗೆ ಯೋಚಿಸಬೇಕಿದೆ. ತೀರ್ಥಯಾತ್ರೆಗಿಂತ ಇದು ಎಷ್ಟೋ ಸಾರ್ಥಕ.

ದುರಿತ ಗಜಕೆ ಪಂಚಾನನ

ಇನ್ನೊಂದು ಕಾರಣ | ವಿಜಿತ

ಮೆರಿಕೆಯಲ್ಲಿ ಗುಲಾಮಗಿರಿ ಪದ್ಧತಿ ವ್ಯಾಪಕವಾಗಿ ರೂಢಿಯಲ್ಲಿದ್ದ ಕಾಲ. ಕರಿಯರ ಪಾಲಿಗೆ ನರಕಸದೃಶವೆಂಬಂತಿದ್ದ ಅಂಥ ಪರಿಸ್ಥಿತಿಯಲ್ಲಿ, ಕರಿಯನೊಬ್ಬನ ವಿರುದ್ಧ ಬಿಳಿಯ ಹೆಂಗಸನ್ನು ಬಲಾತ್ಕರಿಸಿದ ಆರೋಪ ಬರುತ್ತದೆ. ಕರಿಯನ ಪರವಾಗಿ ವಾದಿಸಲು ಯಾವೊಬ್ಬ ವಕೀಲನೂ ಒಪ್ಪುವುದಿಲ್ಲ. ವಿಚಿತ್ರ ತಬ್ಬಲಿಯಂತೆ ನಿರ್ಮಾನುಷ ಬಯಲಲ್ಲಿ ಒಬ್ಬಂಟಿಯಾಗಿ ನಿಲ್ಲುತ್ತಾನೆ ಆ ಅಮಾಯಕ. ಆಗ ಬರುತ್ತಾನೆ ಆತನ ಬಳಿಗೊಬ್ಬ ವಕೀಲ. ಅಚ್ಚರಿಯೆಂದರೆ ಆತ ಬಿಳಿಯ. ಆಟಿಕಸ್ ಫಿಂಚ್ ಎಂದು ಆತನ ಹೆಸರು. ಆರೋಪಿ ಸ್ಥಾನದಲ್ಲಿ ನಿಂತ ಕರಿಯನ ಪರವಾಗಿ ವಾದಿಸಲು ಮುಂದಾಗುವಾಗ ತಾನು ನೈತಿಕವಾಗಿ ಸರಿಯಾದದ್ದನ್ನೇ ಮಾಡುತ್ತಿದ್ದೇನೆ ಎಂಬುದೊಂದೇ ಫಿಂಚ್ ಬಲಕ್ಕಿರುವುದು. ಹೆಜ್ಜೆಹೆಜ್ಜೆಗೂ ಸೋಲಿನತ್ತಲೇ ಸಾಗುತ್ತಿರುವವನನ್ನು ಕಾಪಾಡಿಕೊಳ್ಳಲು ಸಮರ್ಥಿಸಿಕೊಳ್ಳಲು ವಸ್ತುಸ್ಥಿತಿ ಗೊತ್ತಿದ್ದೂ ಫಿಂಚ್ ಸತತ ಹೋರಾಡುತ್ತಾನೆ.

ತೀರ್ಪು ಹೊರಬೀಳುತ್ತದೆ. ನಿರೀಕ್ಷೆಯಂತೆ ಕರಿಯನನ್ನು ಅಪರಾಧಿ ಎಂದು ಘೋಷಿಸಲಾಗುತ್ತದೆ. ಗೆದ್ದೆವೆಂಬ ಜೋರಿನಲ್ಲಿ ಬಿಳಿಯರೆಲ್ಲ ಕೇಕೆ ಹಾಕುತ್ತ ಕೋರ್ಟಿನಿಂದ ಹೊರಹೋಗುತ್ತಿರುವಾಗ, ಕೋರ್ಟ್ ರೂಮಿನಲ್ಲಿ ಫಿಂಚ್ ತನ್ನ ಫೈಲುಗಳನ್ನು ಮರಳಿ ಬ್ಯಾಗಿನಲ್ಲಿಡುತ್ತ ಒಬ್ಬಂಟಿಯಾಗಿ ನಿಂತಿರುತ್ತಾನೆ. ವಿಜಯೋತ್ಸವ ಆಚರಿಸಿಕೊಂಡು ಹೋಗುತ್ತಿದ್ದ ಬಿಳಿಯರ ಮಧ್ಯೆಯಿಂದಲೇ ಫಿಂಚ್ ಹೊರಹೋಗುತ್ತಿದ್ದಾಗ ಅಲ್ಲೆ ಒಂದು ಬದಿಯಲ್ಲಿ ಕೂತಿದ್ದ ಕರಿಯರ ಸಮೂಹ ಎದ್ದುನಿಂತು ಆತನಿಗೆ ಗೌರವ ಸೂಚಿಸುತ್ತದೆ. ಜತೆಯಲ್ಲೇ ಕೂತಿದ್ದ ಫಿಂಚ್ ಮಗಳಿಗೆ ಅದೇ ಕರಿಯರ ಹೆಣ್ಣೊಬ್ಬಳು “ಎದ್ದು ನಿಲ್ಲಮ್ಮಾ, ನಿನ್ನ ಅಪ್ಪ ಬರುತ್ತಿದ್ದಾರೆ” ಎಂದು ಸೂಚಿಸುತ್ತಾಳೆ. ಈ ಬಗೆಯಲ್ಲಿ, ತಮ್ಮ ಸಲುವಾಗಿ ಹೋರಾಡಿದವನನ್ನು ಆ ಜನಾಂಗ ಸೋತ ಉರಿಯನ್ನೂ ಮರೆತು ಅಭಿಮಾನದ ದೀಪ ಹಚ್ಚಿ ಎದೆಯೊಳಗೆ ತುಂಬಿಕೊಳ್ಳುತ್ತದೆ.

to1

ಹತಾಶ ಸ್ಥಿತಿಯಲ್ಲೂ ಸತ್ಯ ಮತ್ತು ನೈತಿಕತೆಯ ಒಂದು ಸಣ್ಣ ಎಳೆಯನ್ನು ತುಂಡಾಗದಂತೆ ಉಳಿಸಿಕೊಳ್ಳಬೇಕೆಂದು ಇಡೀ ತನ್ನ ಸಮುದಾಯವನ್ನೇ ಎದುರುಹಾಕಿಕೊಳ್ಳುವ ಫಿಂಚ್ ಹೋರಾಟಗಾಥೆ ಅಮೆರಿಕನ್ ಲೇಖಕಿ ಹಾರ್ಪರ್ ಲೀ ಬರೆದ To Kill A Mockingbird ಎಂಬ ಕೃತಿ. (೧೯೬೦ರಲ್ಲಿ ಪ್ರಕಟಗೊಂಡ ಈ ಕೃತಿ ಪುಲಿಟ್ಜರ್ ಪ್ರಶಸ್ತಿ ಪಡೆದಿದೆ. ಅದಕ್ಕಿಂತ ಹೆಚ್ಚಾಗಿ ಹಾರ್ಪರ್ ಲೀ ಗುರುತಾಗುವುದೇ ಈ ಕೃತಿಯ ಮೂಲಕ. ಇದು ೧೯೬೨ರಲ್ಲಿ ಚಲನಚಿತ್ರವಾಗಿಯೂ ಅಷ್ಟೇ ಗಮನ ಸೆಳೆಯಿತು.) ಇಡೀ ಕಥೆ ನಿರೂಪಿತವಾಗಿರುವುದು ಫಿಂಚ್ ಮಗಳ ಗ್ರಹಿಕೆಯಲ್ಲಿ. ೮ ವರ್ಷದ ಆ ಎಳೆಯಳ ಕಣ್ಣಲ್ಲಿ ಅಪ್ಪ ಆ ಕರಿಯನ ಪರವಾಗಿ ವಾದಿಸುತ್ತ ಹೋಗುವ ಚಿತ್ರ ಅಗಾಧದ್ದಾಗಿ ನಿಲ್ಲುತ್ತದೆ. ಅಪ್ಪನ ಅಂತಃಶಕ್ತಿ, ಬುದ್ಧಿಮತ್ತೆ, ಸಾಹಸೀ ಮನೋಭಾವ ಅವಳೆದುರು ತೆರೆದುಕೊಳ್ಳುತ್ತ ಹೋಗುತ್ತದೆ. ಹೀರೋ ಆಗಿ ಅಪ್ಪ ಅವಳ ಕಣ್ಮನಗಳಲ್ಲಿ ಸ್ಥಾಪಿತವಾಗುತ್ತಾನೆ. ಫಿಂಚ್ ಪ್ರತಿನಿಧಿಸುವ ಮೌಲ್ಯಗಳು, ಕ್ರೌರ್ಯ ಮತ್ತು ಹಿಂಸೆ ತುಂಬಿರುವ ಜಗತ್ತಿನಲ್ಲೇ ದಯಾಮಯತೆ ಮತ್ತು ಘನತೆ ಕೂಡ ತನ್ನ ಪರಮ ರೂಪದಲ್ಲಿ ಗೋಚರವಾಗಬಲ್ಲದು ಎಂಬ ಭರವಸೆಯನ್ನು ತುಂಬುತ್ತವೆ.

ಮೋಕಿಂಗ್ ಬರ್ಡ್, ಇತರ ಪಕ್ಷಿಗಳ ದನಿಯನ್ನು ಅನುಕರಿಸುವ ಅಮೆರಿಕದ ಒಂದು ಜಾತಿಯ ಹಾಡುಹಕ್ಕಿ. ಅದು ನಿರುಪದ್ರವಿ ಕೂಡ. ನಮ್ಮನ್ನು ಘಾಸಿಗೊಳಿಸದವರ ಬದುಕನ್ನು ನಾಶಮಾಡಹೊರಡುವುದು ಎಂಥ ನೀಚತನ ಎಂಬ ಕಳವಳವನ್ನು ಧ್ವನಿಸುತ್ತದೆ ಈ ಪುಸ್ತಕ.

ಫಿಂಚ್ ತನ್ನ ಮಗಳಿಗೆ ಹೇಳುವ ಮಾತೊಂದು ಯಾವತ್ತಿಗೂ ಜೀವಂತವಾಗುಳಿಯುವಂಥದ್ದು: “ಒಬ್ಬ ಮನುಷ್ಯನ ಸಂದರ್ಭವನ್ನು ಸ್ವತಃ ಆತನ ದೃಷ್ಟಿಯಿಂದ ಗ್ರಹಿಸುವುದು ಸಾಧ್ಯವಾಗದೇ ಹೋದರೆ ಎಂದಿಗೂ ನೀನು ಆತನನ್ನು ಅರ್ಥ ಮಾಡಿಕೊಳ್ಳಲಾರೆ.”

* * *

ಇವತ್ತಿನ ದುರಂತವೇನೆಂದರೆ, ಹೀಗೆ ನಿರುಪದ್ರವಿ ಜೀವಿಯ ಮನಸ್ಸಿಗೆ ಕಿವಿಗೊಡುವ ತಾಳ್ಮೆಯಾಗಲಿ, ಅದರ ಮಿಡಿತವನ್ನು ಕೇಳಿಸಿಕೊಳ್ಳುವ ಗ್ರಹಣಶಕ್ತಿಯಾಗಲಿ ರಣೋತ್ಸಾಹಿಗಳಿಗೆ ಇಲ್ಲದೇ ಇರುವುದು. ಈ ವಿಚ್ಛಿದ್ರಕಾರಿಗಳಿಗೆ ಒಡೆಯುವುದೊಂದೇ ಗೊತ್ತು; ಬಲಹೀನರನ್ನು ಬೆದರಿಸುವುದಷ್ಟೇ ಗೊತ್ತು. ಯಾರೋ ಕಟ್ಟಿಕೊಂಡಿದ್ದ ಕನಸು ನುಚ್ಚುನೂರಾಗಿ ಬೀಳುವಾಗ, ಯಾರೋ ನರಳುವಾಗ ಇವರು ಅತ್ಯಂತ ಸಂತೋಷದಿಂದ ಕೇಕೆ ಹಾಕುತ್ತಾರೆ. ಏನೋ ಮಹತ್ತರವಾದದ್ದನ್ನು ಮಾಡಿದೆವೆಂಬ ಹಮ್ಮಿನಿಂದ ಬೀಗುತ್ತಾರೆಯೇ ಹೊರತು ಕಿಂಚಿತ್ ಅಪರಾಧಿ ಪ್ರಜ್ಞೆಯೂ ಇವರನ್ನು ಕಾಡುವುದಿಲ್ಲ.

To Kill A Mockingbird ಕೃತಿಯ ಕಥಾನಾಯಕ ಫಿಂಚ್ ಯಾಕೆ ಒಂದು ಘನವಾದ ರೂಪಕವಾಗಿ ಉಳಿದುಬಿಡುತ್ತಾನೆಂದರೆ, ಈ ಬಗೆಯ ವಿಚ್ಛಿದ್ರಕಾರಿಗಳನ್ನು ಕೆಲ ಸಮಯದ ಮಟ್ಟಿಗಾದರೂ ಅಧೀರರನ್ನಾಗಿ ನಿಲ್ಲಿಸಿಬಿಡುವುದರಿಂದ. ದುರ್ಬಲ ಅಮಾಯಕರ ಪಾಲಿನ ದಾರಿದೀಪದಂತಿರುವ ಅಂಥ ವ್ಯಕ್ತಿತ್ವವೂ ಅಧರ್ಮದ ಗೆಲುವಿನ ಮುಂದೆ ನಿಸ್ಸಹಾಯಕವಾಗಿ ನಿಲ್ಲುವಾಗ ಒಂದು ಸಮುದಾಯ ಅನುಭವಿಸುವ ಆಘಾತ ಎಲ್ಲ ಕಾಲದ ಕಥಾನಕಗಳ ಒಂದು ಭಾಗವೇ ಆಗಿರುವಂಥದ್ದು.

ಗಾಂಧಿಯ ಬಗ್ಗೆ ಬರೆಯುತ್ತ ಲೋಹಿಯಾ ಹೇಳುತ್ತಾರೆ: “…ಮಗನನ್ನು ಕಳೆದುಕೊಂಡ ತಾಯಿಯೇ ಆಗಲಿ, ಪ್ರೇಯಸಿಯನ್ನು ಕಳೆದುಕೊಂಡ ಪ್ರಿಯತಮನೇ ಆಗಲಿ ಅವರಿಂದ ಏನೋ ಒಂದು ಸಮಾಧಾನ ಶಾಂತಿ ಪಡೆಯುತ್ತಿದ್ದರು. ಇದೊಂದು ಅತ್ಯಂತ ವಿಚಿತ್ರ ಸಂಗತಿ. ಆದರೂ ಸತ್ಯ ಸಂಗತಿ. ಎಲ್ಲ ದೀನರೂ ದಲಿತರೂ ಸಂಕಟಕ್ಕೊಳಗಾದವರೂ ಅವರಲ್ಲಿ ಧನ್ಯತೆಯನ್ನೂ ಶಾಂತಿಯನ್ನೂ ಹೊಂದುತ್ತಿದ್ದರು. ಆದ್ದರಿಂದಲೇ ಆತ ಸತ್ತಾಗ ಕೋಟಿಗಟ್ಟಲೆ ಜನರು ಅನುಭವಿಸಿದ ಹತಾಶೆ, ದುಃಖ ಇವು ಹಿಂದೆಂದೂ ಸಂಭವಿಸಿರಲಿಲ್ಲ.”

ಗಾಂಧಿಯ ನಿರ್ಗಮನ ಉಂಟುಮಾಡಿದ ಹತಾಶೆ ಬಲು ದೊಡ್ಡ ಪ್ರಮಾಣದ್ದಾಗಿದ್ದಾಗಲೇ, ಗಾಂಧಿಯನ್ನು ಕೊಂದವರ ವಕೀಲಿಕೆ, ವಶೀಲಿಗಳೂ ಅಷ್ಟೇ ಮಟ್ಟದಲ್ಲಿ ಮತ್ತೊಂದು ಮಗ್ಗುಲಲ್ಲಿ ನಡೆದವು. ಲೋಹಿಯಾ ಅವರೇ ಗಾಂಧಿ ಕಗ್ಗೊಲೆಯ ಸಂದರ್ಭವನ್ನು ವಿವರಿಸುತ್ತ ಹೀಗೆ ಬರೆಯುತ್ತಾರೆ: “ದೇಶದ ರಕ್ಷಕ ಕಣ್ಣೆದುರೇ ಸತ್ತುಬಿದ್ದಿದ್ದ. ಹಾಗೂ ದೇಶದ ದೊರೆಗಳೆನ್ನಿಸಿಕೊಂಡವರು ಕಣ್ಣೀರು ಹರಿಸುತ್ತಿದ್ದರು. ಗಾಂಧೀಜಿಯ ನೆಚ್ಚಿನ ಶಿಷ್ಯರಾದ ನೆಹರೂ, ಪಟೇಲರು ಅಧಿಕಾರದ ಗದ್ದುಗೆಯ ಮೇಲಿರುವಾಗಲೇ ಗಾಂಧಿಯವರ ಹತ್ಯೆ ನಡೆದಿತ್ತು.”

ಗಾಂಧಿಯ ಆತ್ಮಚೈತನ್ಯವನ್ನು ತಮ್ಮ ಮಿತಿಯಲ್ಲಾದರೂ ಕಾಯ್ದುಕೊಳ್ಳಬೇಕೆಂದು ಶ್ರಮಿಸುತ್ತಿರುವವರ ವಿಚಾರದಲ್ಲೂ ಈ ವಿಪರ್ಯಾಸ ಮುಂದುವರಿದೇ ಇದೆ. ಗಾಂಧಿಯ ಹೆಜ್ಜೆಯನ್ನು ಕಾಯಾ ವಾಚಾ ಮನಸಾ ಅನುಸರಿಸುತ್ತಿರುವವರ ಸಂಕಟ ಒಂದೆಡೆಯಾದರೆ, ಗಾಂಧಿಯನ್ನು ಅನುಸರಿಸುತ್ತಿದ್ದೇವೆಂದು ನಾಟಕವಾಡುವವರ ಅಟ್ಟಹಾಸ ಮತ್ತೊಂದೆಡೆ ನಡೆದೇ ಇದೆ. ಅಥವಾ ಹೀಗೆಲ್ಲ ಹೇಳುವುದೇ ಅತ್ಯಂತ ಕ್ಲೀಷೆಯಾಗುತ್ತದೆ.

ಯಾಕೆಂದರೆ, ಇವತ್ತು ಗಾಂಧಿ ಎಂದರೆ ಮೋಹನದಾಸ ಕರಮಚಂದ ಗಾಂಧಿ ಖಂಡಿತ ಅಲ್ಲ; ಅದೊಂದು ರಾಜಕೀಯ ಮನೆತನದ ಹೆಸರು ಮಾತ್ರ. ಗಾಂಧಿಯ ಗುರುತೇ ಇಲ್ಲದವರು ಗಾಂಧಿ ಹೇಳುತ್ತಿದ್ದ ಸಾಂತ್ವನವನ್ನು ಹೇಗೆ ಹೇಳಿಯಾರು? ಗಾಂಧಿ ಆಲಿಸುತ್ತಿದ್ದಂತೆ ಮತ್ತೊಂದು ಮನಸ್ಸಿನ ತಳಮಳವನ್ನು ಹೇಗೆ ಆಲಿಸಿಯಾರು?

ಯಾರದೋ ಮನೆಗೆ ಬೆಂಕಿ ಹಚ್ಚಿ ಚಳಿ ಕಾಯಿಸಿಕೊಳ್ಳುವ ವಿಚ್ಛಿದ್ರಕಾರಿಗಳಿಗೆ, ಆ ಬೆಂಕಿಯನ್ನು ಮನೆ ಬೆಳಗುವ ದೀಪವಾಗಿಸಬಹುದಿತ್ತಲ್ಲ  ಎಂದು ಯಾವುದೋ ಒಂದು ಅಸಾಧಾರಣ ಕ್ಷಣದಲ್ಲಾದರೂ ಅನ್ನಿಸಿಬಿಡುವ ಹಾಗಿದ್ದರೆ ಮತ್ತಷ್ಟು ಅಮಾಯಕರ ಮನೆಗಳು ಉಳಿದುಕೊಳ್ಳುತ್ತವೆ ಎನ್ನುವುದಕ್ಕಿಂತ, ಮನಸ್ಸುಗಳು ಬೇಯುವುದು ತಪ್ಪಿದಂತಾಗುತ್ತದೆ.

ಫಿಂಚ್ ಹೇಳಿದ ಬಗೆಯಲ್ಲಿ ಮನುಷ್ಯನನ್ನು ಮನುಷ್ಯ ಅರ್ಥ ಮಾಡಿಕೊಳ್ಳುವುದು ಯಾವಾಗ?

ಅವನ ಕಣ್ಣ ಮಾತಿಗೆ ಕಾಯುತ್ತ…

art4

ಚೇತನಾ ತೀರ್ಥಹಳ್ಳಿ

ಅಂವ ಹೊರಟು ನಿಂತಿದ್ದ.
ಅವಳು ಹನಿಗಣ್ಣಾಗಿದ್ದಳು.
ಮೊದಲಿಂದ್ಲೂ ಹಾಗೇ. ಬರೆವಾಗಲೆಲ್ಲ `ಹನಿಗಣ್ಣಾಗೋದು’ ಅವಳೇ. ನೀವದನ್ನ ಕ್ಲೀಷೆ ಅಂದರೂ ಸರಿ.

ಹಾಗೆ ಹೊರಟು ನಿಂತವ ಬಂದಿದ್ದೂ ಅದೇ ಬೆಳಗು.
ಅದೊಂದು ಬೆಳಗಿಗಾಗಿ ಅವಳು ಬಲಿ ಕೊಟ್ಟ ರಾತ್ರಿಗಳು ಹತ್ತುಹಲವು.
ಸಂಜೆವರೆಗೂ ಮನೆವಾಳ್ತೆಯ ನೂರೆಂಟು ಹಡದಿ. ಕೂಡುಕುಟುಂಬ, ಕುಂತು ಉಣ್ಣೋದು ಹೇಗೆ?
ಮನೆ ತುಂಬ ಹರಿದಾಡುವಾಗೊಮ್ಮೆ ಅವನ ಹೆಜ್ಜೆ ಸಪ್ಪಳಕ್ಕೆ ಕಿವಿಯಾಗುವಳು. ನೆರಳು ಕಂಡಲ್ಲೆಲ್ಲ ತವಕ. ಅದರ ಹಿಂದಿನ ಬೆಳಕು ಅವನೇ ಇರಬಹುದೇನೋ!?
ಬಾಯ್ತುಂಬ ಮಾತಿಗೆ ನಾಲಿಗೆ ಕಡಿಯುತ್ತಿದೆ.  ಮಾಡುವುದೇನು?
ಅಂವ ಬಂದಾಗಿನಿಂದ ಉಯ್ಯಾಲೆ ಮೇಲೆ ಕುಂತ ಮಾವ ಅಷ್ಟೂ ದಿನಗಳ ಲೆಕ್ಕ ಕೇಳ್ತಲೇ ಇದ್ದಾರೆ.
ಅಯ್ಯೋ! ತಾಳೆಯಾಗ್ತಲೇ ಇಲ್ಲ!? ಇಂವ ನಾಲಿಗೆ ಕಚ್ಚಿಕೊಳ್ತಿದಾನೆ. ಬೆಳ್ಳಂಬೆಳಗ್ಗೆ ಕೋಣೆಯ ಕದ ತಟ್ಟಿ, ಅಂವ ಕೊಟ್ಟ ಮುತ್ತಿನುಂಗುರ… ಮುತ್ತು ಕೊಡಲು ಮರೆತೇ ಹೋದ…
ಇರುಳಿಗಾಗಿ ಕಾಯುತ್ತಿದ್ದಾಳೆ ಇವಳು.

ಅವನ ಸುತ್ತ ಮೈದುನ, ನಾದಿನಿಯರ ದಂಡು. ಸಾಹಸಗಳದ್ದೇ ಕಥೆ. ಮುಖದಲ್ಲಿ ಕಣ್ಣು ನೆಟ್ಟು ನೋಡೋಣವೆಂದರೆ, ಅಡುಗೆಮನೆ  ಬಾಗಿಲಿಗೆ ಒರಗಿಕೊಂಡೇ ತನ್ನ ಪಕ್ಕ ನಿಂತಿರುವ ಅತ್ತೆ!
ಅವನ ಮಾತು ಕೇಳುತ್ತ, ಕೇಳುತ್ತ ಅವಳ ಕಿವಿಗೆ ಬಡಿದಿದ್ದು ಸಿಡಿಲು! ಅಂದಿನಿರುಳೇ ಅಂವ ಮತ್ತೆ ಹೊರಟಿದ್ದಾನೆ!!
ಮಾತಲ್ಲಿ ಮೈ ಮರೆತವಗೆ ತನ್ನ ಹೆಜ್ಜೆ ಸಪ್ಪಳ, ಕೈಬಳೆ ಸದ್ದು, ನಿಟ್ಟುಸಿರು… ಯಾವುದೂ ಕೇಳ್ತಲೇ ಇಲ್ಲ.
ಕಣ್ಣು ತುಂಬಿ ನಿಂತವಳಿಗೆ ಅತ್ತೆಯ ಬೈಗುಳ ಬೇರೆ.
ಪಾಪ, ಅವರಿಗೆ ವಯಸ್ಸಾಗಿದೆ. ಕೆಲವೊಮ್ಮೆ ಜಾಣ ಮರೆವು ಕೂಡ!

*
ಹೊರಡುವ ಮೊದಲೊಮ್ಮೆ ಏಕಾಂತಕ್ಕೆ ಬಂದವನ ಬಾಯ್ತುಂಬ ಹತ್ತು ನಿಮಿಷದ ಭಾಷಣ.
ಅವನನ್ನ ತಡೆಯಲಿಕ್ಕೆ ಇವಳಿಗೆ, ಅವನೊಪ್ಪಬಲ್ಲ ಯಾವ ಕಾರಣವೂ ಸಿಗ್ತಲೇ ಇಲ್ಲ!
ಇಷ್ಟಕ್ಕೂ ಗಂಡಸಿಗೆ ಲೋಕೋಪಕಾರದ ನೂರೆಂಟು ಸಂಗತಿಗಳಿರುತ್ತವೆ, ಜೀವನ ಮಾಡಲಿಕ್ಕೆ.
ಅವನೊಬ್ಬನೇ ಜಗತ್ತಾಗಿರುವ ಈ ಇವಳ ಬದುಕಿಗೆ ನೆವ ಬೇರೇನಿದೆ ?

*

ಯಾರೋ ಹೇಳೀರುವುದು ನಿಜ.
ಹೆಣ್ಣು, ಪ್ರೀತಿ, ಪ್ರೇಮ- ಇವೆಲ್ಲವೂ ಗಂಡಸಿನ ಜೀವನದೊಂದು ಭಾಗ ಮಾತ್ರ.
ಹೆಣ್ಣಿಗೆ,
ಅದೇ ಇಡಿಯ ಜೀವನ…

Next Page »